ಕೊಪ್ಪಳ: ಮಾಜಿ ಶಾಸಕ ಬಸವರಾಜ ಹಿಟ್ನಾಳಗೆ ಸೋಂಕು ದೃಢ
Team Udayavani, Sep 5, 2020, 10:39 PM IST
ಕೊಪ್ಪಳ: ಕೊಪ್ಪಳ ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಬೆನ್ನಲ್ಲೇ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಶಾಸಕರಿಗೆ ಶುಕ್ರವಾರ ಸಂಜೆ ಸ್ವಲ್ಪ ಆರೋಗ್ಯದಲ್ಲಿ ಸುಸ್ತು ಕಾಣಿಸಿಕೊಂಡಿತ್ತು. ಕೋವಿಡ್ ಪರೀಕ್ಷೆಗೆ ಒಳಗಾದಾಗ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕಳೆದ ಕೆಲವು ದಿನಗಳ ಹಿಂದಷ್ಟೆ ಅವರ ಪುತ್ರ ಹಾಗೂ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸೋಂಕು ದೃಢಪಟ್ಟಿತ್ತು. ಅವರೂ ಸಹಿತ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ಸಾಗಿದ್ದರು. ಈಗ ತಂದೆಗೆ ಸೋಂಕು ದೃಢಪಟ್ಟಿದೆ. ಅವರು ಬೇಗ ಗುಣಮುಖರಾಗಿ ಜಿಲ್ಲೆಗೆ ಮರಳಲಿ ಎಂದು ಹಲವು ಗಣ್ಯರು ಹಾರೈಸಿದ್ದಾರೆ.