ಹಳ್ಳಿಗಳಿಗೆ ಕೋವಿಡ್ ವಲಸೆ
Team Udayavani, May 6, 2021, 6:30 AM IST
ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದಲ್ಲಿ 4 ದಿನಗಳಿಂದ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕರ್ಫ್ಯೂ ಹಿನ್ನೆಲೆಯಲ್ಲಿ ರಾಜಧಾನಿ ಯಿಂದ ತಮ್ಮ ಊರುಗಳಿಗೆ ವಾಪಸು ತೆರಳಿದವರು ಇದಕ್ಕೆ ಕಾರಣವಾಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಶೇ. 30 ರಷ್ಟು ಇಳಿಕೆಯಾಗಿದೆ.
ಕರ್ಫ್ಯೂ ಪೂರ್ವದಲ್ಲಿ ನಿತ್ಯವೂ ಹೊಸ ಪ್ರಕರಣಗಳ ಪೈಕಿ ಶೇ.70ರಷ್ಟು ಬೆಂಗಳೂರಿಗೆ ಸಂಬಂಧಿಸಿರುತ್ತಿತ್ತು. ನಾಲ್ಕು ದಿನಗಳಿಂದ ಈ ಪ್ರಮಾಣ ಶೇ 40 ಕ್ಕೆ ಇಳಿದಿದೆ. ಬದಲಾಗಿ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚುತ್ತಿರುವುದು ಬೆಂಗಳೂರಿನಿಂದ ಹೋದವರು ತಮ್ಮ ಜತೆ ಸೋಂಕನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ದಿದ್ದಾರೆ ಎಂಬ ಶಂಕೆಯನ್ನು ದೃಢಪಡಿಸಿದೆ.
ಒಂದು ಸಾವಿರ ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು ಮೈಸೂರು, ಬಳ್ಳಾರಿ, ತುಮಕೂರುಗಳಲ್ಲಿ ಎರಡು ಸಾವಿರಕ್ಕೆ, 500 ಆಸುಪಾಸಿನಲ್ಲಿದ್ದ ಕಲಬುರಗಿ, ಮಂಡ್ಯ ಧಾರವಾಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಶಿವಮೊಗ್ಗದಲ್ಲಿ ಒಂದು ಸಾವಿರಕ್ಕೆ ಹೆಚ್ಚಳವಾಗಿವೆ. ದಕ್ಷಿಣ ಕನ್ನಡ, ಉಡುಪಿಯಲ್ಲೂ ಹೆಚ್ಚಳವಾಗಿದೆ. ಮೈಸೂರು, ಬಳ್ಳಾರಿ, ಮಂಡ್ಯ, ತುಮಕೂರಿನಲ್ಲೂ ಹೆಚ್ಚಳವಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿಯೂ ಸೋಂಕಿತರ ಸಾವು, 200 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಬಹುತೇಕ ಕಡೆ ಸೋಂಕು ಲಕ್ಷಣ ಕಾಣಿಸಿಕೊಂಡ ವರನ್ನು ವಿಚಾರಿಸಿದಾಗ ಅನೇಕರು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಿದ್ದರು ಎಂಬ ಉತ್ತರ ನೀಡುತ್ತಿದ್ದಾರೆ ಎನ್ನುತ್ತಾರೆ ತಾಲೂಕು ಆಸ್ಪತ್ರೆಗಳ ಸಿಬಂದಿ.