Covid19 ದೇಶದಲ್ಲಿ ಇಳಿಕೆ, ರಾಜ್ಯದಲ್ಲಿ ಏರಿಕೆ: ಮುಚ್ಚಿಟ್ಟಿದ್ದೇ ಇಂದು ನಮಗೆ ಮುಳುವಾಯಿತೇ?
Team Udayavani, Oct 10, 2020, 9:15 AM IST
ಬೆಂಗಳೂರು: ನಾವು ಆರಂಭದಲ್ಲಿ ಕೋವಿಡ್-19 ಸೋಂಕನ್ನು ಮುಚ್ಚಿಟ್ಟಿದ್ದೆ ಮುಳುವಾಯಿತೆ? ಈಗಿನ ಪರೀಕ್ಷೆ ಪ್ರಮಾಣ ಕೆಲ ತಿಂಗಳುಗಳ ಹಿಂದೆ ಆರಂಭವಾಗಿದ್ದರೆ, ಸಕ್ರಿಯ ಪ್ರಕರಣಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನ ಎಂಬ ಕಳಂಕದಿಂದ ತಪ್ಪಿಸಿಕೊಳ್ಳಬಹುದಿತ್ತೇ? ಈಗಲಾದರೂ ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾಡಬಹುದೇ?
ಸಂತಸದ ವಿಷಯ: ಇಡೀ ದೇಶ ಈಗ ನಿತ್ಯ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಇಳಿಕೆ ಹಾದಿಯಲ್ಲಿ ಸಾಗುತ್ತಿದೆ.
ನೊಂದುಕುಳ್ಳುವ ವಿಷಯ: ನಾವು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ದೇಶದ ಸೋಂಕು ಪಾಸಿಟಿವಿಟಿ ದರ ಶೇ.8 ರಷ್ಟಿದೆ, ಕರ್ನಾಟಕದಲ್ಲಿ ಶೇ.12 ರಷ್ಟಿದೆ. ದೇಶದಲ್ಲಿಯೇ ಮೂರನೇ ಅತಿ ಹೆಚ್ಚು ಸೋಂಕು ಪ್ರಕರಣಗಳು, ಎರಡನೇ ಅತಿ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳು ಇಲ್ಲಿವೆ. ಸದ್ಯ ಬೆಂಗಳೂರು ಸೋಂಕು ತೀವ್ರತೆಯಲ್ಲಿ ರಾಷ್ಟ್ರಕ್ಕೆ ರಾಜಧಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರು, ಸರ್ಕಾರ, ಮಾತ್ರವಲ್ಲದೆ ಸಾರ್ವಜನಿಕರ ಮನಸ್ಸಿನಲ್ಲೂ ಮೇಲ್ಕಂಡ ಪ್ರಶ್ನೆಗಳು ಮೂಡಿವೆ.
ಸಾಂಕ್ರಾಮಿಕ ಕಾಯಿಲೆ ನಿಯಂತ್ರಣದಲ್ಲಿ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತದೆ. ತ್ವರಿತವಾಗಿ, ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಮಾಡಿ ಅವರಲ್ಲಿರುವ ವೈರಸ್ ಅನ್ನು ಶಮನ ಮಾಡಿದರೆ ಆ ಪ್ರದೇಶದಲ್ಲಿ ಸೋಂಕನ್ನು ನಿಯಂತ್ರಿಸಬಹುದು. ಹೆಚ್ಚು ಪರೀಕ್ಷೆ ನಡೆಸದಿದ್ದರೆ ವೈರಸ್ ಹೊಂದಿರುವವರು ಪತ್ತೆಯಾಗುವುದಿಲ್ಲ. ಆಗ ಸೋಂಕು ಸಮುದಾಯಕ್ಕೆ ಹರಡಿ ಭಾರೀ ಪ್ರಮಾಣದ ಹಾನಿ ಮಾಡುತ್ತದೆ. ಈಗ ಅದೇ ಆಗಿದೆ!
ಸೋಂಕು ಆರಂಭಿಕ ಹಂತದಲ್ಲಿದ್ದಾಗಲೇ ಪರೀಕ್ಷೆಗಳನ್ನು ಹೆಚ್ಚಿದ ರಾಜ್ಯಗಳು ಇಂದು ಇಳಿಕೆ ಹಾದಿಯಲ್ಲಿ ಸಾಗುತ್ತಿವೆ. ಇದಕ್ಕೆ ಉದಾಹರಣೆ ಎರಡು ತಿಂಗಳ ಹಿಂದೆ ನಿತ್ಯ ಹೊಸ ಪ್ರಕರಣಗಳಲ್ಲಿ 40 ಸಾವಿರದಿಂದ ಸದ್ಯ 15 ಸಾವಿರಕ್ಕಿಳಿದಿರುವ ಮಹಾರಾಷ್ಟ್ರ 20 ಸಾವಿರದಿಂದ ಮೂರು ಸಾವಿರಕ್ಕಿಳಿದ ದೆಹಲಿ, ಹತ್ತು ಸಾವಿರದಿಂದ ಐದು ಸಾವಿರಕ್ಕಿಳದ ತಮಿಳುನಾಡು ಮತ್ತು ಆಂದ್ರ ಪ್ರದೇಶ ರಾಜ್ಯಗಳಾಗಿವೆ. ಅದೇ ತಡವಾಗಿ ಪರೀಕ್ಷೆ ಆರಂಭಿಸಿದ ಕರ್ನಾಟಕ ಮತ್ತು ಕೇರಳದಲ್ಲಿ ಈಗ ನಿತ್ಯ ಪ್ರಕರಣಗಳು ಏರಿಕೆ ಹಾದಿಯಲ್ಲಿವೆ.
ಇದನ್ನೂ ಓದಿ:ಕೋವಿಡ್ ಹಬ್ಬಿಸಿದ್ದು ನಾವಲ್ಲ: ಚೀನ ಡ್ರಾಮಾ
ಮುಂದಿನ ದಿನಗಳಲ್ಲಿ ನಿತ್ಯ ಪ್ರಕರಣಗಳು 20 ಸಾವಿರಕ್ಕೆ?
ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಅಧಿಕ ಪರೀಕ್ಷೆಗಳು ನಡೆಯುತ್ತಿವೆ. ಇದೇ ಪರೀಕ್ಷೆಗಳನ್ನು ಈ ಮುಂಚಿನ ತಿಂಗಳಗಳಲ್ಲಿ ಕೈಗೊಂಡಿದ್ದರೆ ಸೋಂಕಿನ ಹರಡುವಿಕೆಯನ್ನು ಸಾಕಷ್ಟು ನಿಯಂತ್ರಿಸಬಹುದಿತ್ತು. ಸೋಂಕು ಕೂಡಾ ಇಳಿಕೆ ಹಾದಿಯಲ್ಲಿ ಕರ್ನಾಟಕವು ಇರುತ್ತಿತ್ತು. ಸದ್ಯ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗಿದ್ದರೂ, ತಡವಾಗಿ ಹೆಚ್ಚಳವಾಗಿರುವ ಕಾರಣ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಸಾಕಷ್ಟು ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆ ಸಂಖ್ಯೆ ಎರಡು ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಅಗತ್ಯ ತಯಾರಿ ಮಾಡುತ್ತಿದ್ದು, ಸದ್ಯ ಪಾಸಿಟಿವಿಟ ದರದ ಪ್ರಕಾರ ಎರಡು ಲಕ್ಷ ಪರೀಕ್ಷೆ ನಡೆದರೆ 20 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಲಿದೆ. ಅಲ್ಲದೆ, ದೇಶದಲ್ಲಿಯೇ ಹೆಚ್ಚು ಪ್ರಕರಣಗಳು ಕರ್ನಾಟಕದಲ್ಲಿ ನಿತ್ಯ ವರದಿಯಾಗುವ ಸಾಧ್ಯತೆಗಳಿವೆ ಎನ್ನುವುದು ಆರೋಗ್ಯ ವಲಯ ಪರಿಣಿತರ ಅಭಿಪ್ರಾಯ.
ಸರ್ಕಾರದ್ದು ಮಾತ್ರ ತಪ್ಪಲ್ಲ!
ಸದ್ಯ ರಾಜ್ಯದಲ್ಲಿ 10 ಲಕ್ಷ ಮಂದಿ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿದ್ದಾರೆ. ಈ ಪೈಕಿ ಬಹುತೇಕರು ಕ್ವಾರಂಟೈನ್ ನಿಯಮ ಪಾಲಿಸುತ್ತಿಲ್ಲ. ಜತೆಗೆ ಸಾರ್ವಜನಿಕರು ಕೂಡಾ ಮುಂಜಾಗ್ರತಾ ನಿಯಮ ಪಾಲಿಸುತ್ತಿಲ್ಲ ಎಂದು ವಾರ್ ರೂಂ ಅಂಕಿ ಅಂಶಗಳು ಹೇಳುತ್ತಿವೆ. ಇಂದಿಗೂ ಅನೇಕರು ಪರೀಕ್ಷೆಗೊಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಔಷಧಾಲಯದಿಂದ ಮಾತ್ರೆ ತಂದು ಮನೆಯಲ್ಲಿಯೇ ಇದ್ದು ಸ್ವಯಂ ವಾಸಿ ಮಾಡಿಕೊಳ್ಳುತ್ತೇನೆ ಎಂದು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಲೇ ಸಾವಿನ ಪ್ರಮಾಣ ಹೆಚ್ಚು ಎನ್ನುವುದು ವೈದ್ಯರ ಮಾತು.
ಸೋಂಕು ಶಮನಕ್ಕೆ ಎರಡನೇ ಮದ್ದು
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಹೇಳುವಂತೆ, ಕೋವಿಡ್ ತೀವ್ರತೆ ಕಡಿಮೆ ಮಾಡಲು ಇರುವ ಪ್ರಮುಖ ಎರಡು ಮಾರ್ಗಳೆಂದರೆ ಪರೀಕ್ಷೆ ಹೆಚ್ಚು ನಡೆಸುವುದು, ಜನ ಮುಂಜಾಗ್ರತಾ ಕ್ರಮಕೈಗೊಳ್ಳುವುದಾಗಿದೆ. ಸದ್ಯ ಸರ್ಕಾರ ಪರೀಕ್ಷೆ ಪ್ರಮಾಣ ಹೆಚ್ಚಿಸಿ ನಿಯಂತ್ರಣಕ್ಕೆ ಮುಂದಾಗಿದೆ, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೊಳಗಾಗಿ, ಕೋವಿಡ್ ನಿಯಮಗಳನ್ನು ಪಾಲಿಸುವುದು ಅಗತ್ಯವಿದೆ.
ಸೋಂಕು ಹೆಚ್ಚಾಗಲು ಪ್ರಮುಖ ಕಾರಣಗಳಿವು
*ತಡವಾಗಿ ಸೋಂಕು ಪರೀಕ್ಷೆ ಸಂಖ್ಯೆ ಹೆಚ್ಚಿಸಿರುವುದು, ಪರೀಕ್ಷಾ ವರದಿ ಕೈ ಸೇರುವುದು ತಡವಾಗುತ್ತಿರುವುದು.
*ಸೋಂಕು ಪರೀಕ್ಷೆಗೊಳಗಾಗಲು ಜನ ಹಿಂದೇಟು ಹಾಕುತ್ತಿರುವುದು. (ಪ್ರಾಥಮಿಕ, ದ್ವಿತೀಯ ಸಂಪರ್ಕಿತರು)
* ಕಂಟೈನ್ಮೆಂಟ್ ಝೋನ್ ಮತ್ತು ಕ್ವಾರಂಟೈನ್ ನಿಮಯಗಳನ್ನು ಸರ್ಕಾರ ಸಡಿಲಗೊಳಿಸಿರುವುದು.
* ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಅನ್ಲಾಕ್ ನಿಯಮಾವಳಿಗಳನ್ನು ಸಾರ್ವಜನಿಕರು ಪಾಲಿಸದಿರುವುದು.
*ಹೋ ಐಸೋಲೇಷನ್ ಸೂಕ್ತ ಜಾರಿಯಲ್ಲಿಲ್ಲ. ಇದು ಸೋಂಕಿತರ ಸಂಖ್ಯೆ, ಸಾವು ಹೆಚ್ಚಿಸಿದೆ.
ಆಕ್ಟೋಬರ್1 ರಿಂದ 10ನೇ ತಾರೀಖಿನವರೆಗೆ ನಿತ್ಯ ಸರಾಸರಿ ನೆರೆಯ ರಾಜ್ಯದಲ್ಲಿ ವರದಿಯಾಗುತ್ತಿರುವ ಕೇಸ್/ ಸಾವು
ರಾಜ್ಯ | ಮಹಾರಾಷ್ಟ್ರ | ಕರ್ನಾಟಕ | ಆಂಧ್ರಪ್ರದೇಶ | ಕೇರಳ | ತಮಿಳುನಾಡು |
ಕೇಸ್ | 14,000 | 10,000 | 6000 | 6000 | 5000 |
ಸಾವು | 350 | 115 | 50 | 30 | 60 |
*ಸೋಂಕು ಹೆಚ್ಚಿರುವ ಪ್ರಮುಖ ಐದು ರಾಜ್ಯಗಳ ಪೈಕಿ ಕರ್ನಾಟಕ ಗುಣಮುಖ ದರದಲ್ಲಿ (ಶೇ.81.3) ಕೊನೆಯ ಸ್ಥಾನದಲ್ಲಿದೆ.
ತಿಂಗಳವಾರು ಪರೀಕ್ಷೆ ಪ್ರಮಾಣ
ಮಾರ್ಚ್ – 1,587, ಏಪ್ರಿಲ್ – 55 ಸಾವಿರ, ಮೇ – 2.4 ಲಕ್ಷ, ಜೂನ್ – 3.21 ಲಕ್ಷ, ಜುಲೈ 7.6 ಲಕ್ಷ , ಆಗಸ್ಟ್ 15.6 ಲಕ್ಷ, ಸೆಪ್ಟೆಂಬರ್ 20.1 ಲಕ್ಷ. ಅಕ್ಟೋಬರ್ (10ರವರೆಗೂ) 6.3 ಲಕ್ಷ .
ತಿಂಗಳು | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ 10ರವರೆಗೂ |
ಸೋಂಕು ಪ್ರಕರಣ | 101 | 464 | 2656 | -12,021 | 1.08 ಲಕ್ಷ | 2.06 ಲಕ್ಷ | 2.60 ಲಕ್ಷ | 88,502 |
ಸಾವು | 3 | 18 | 30 | 195 | 2,068 | 3,296 | 3162 | 925 |
ಶೇ.90 ರಷ್ಟು ಅಧಿಕ ಗುಣಮುಖ ಹೊಂದಿರುವ ಜಿಲ್ಲೆಗಳು
ಬಾಗಲಕೋಟೆ (93%), (ಬೀದರ್ 91.7%), ಬಳ್ಳಾರಿ (90.5%) ಬೆಳಗಾವಿ (90.4%) ಗದಗ (92.6%)
ಶೇ.70ಕ್ಕೂ ಕಡಿಮೆ ಗುಣಮುಖ ದರ ಹೊಂದಿರುವ ಜಿಲ್ಲೆಗಳು
ತುಮಕೂರು (77%), ಕೊಲಾರ (77%), ಬೆಂಗಳೂರು ನಗರ (76%), ಹಾಸನ (77%), ಚಿತ್ರದುರ್ಗ (78%)
ಮರಣ ದರ ಹೆಚ್ಚಿರುವ ಜಿಲ್ಲೆಗಳು
ಧಾರವಾಡ (2.7%), ದಕ್ಷಿಣ ಕನ್ನಡ (2.2%), ಮೈಸೂರು (2.1%)
ವರದಿ: ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ