ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ: ಸಿಎಂಗೆ ಪತ್ರ
Team Udayavani, Apr 22, 2020, 12:35 PM IST
ಬೆಂಗಳೂರು: ಮಹಾರಾಷ್ಟ್ರದ ಪತ್ರಕರ್ತರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪತ್ರಕರ್ತರಿಗೆ ತಪಾಸಣೆ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದಲ್ಲಿ 171 ಪತ್ರಕರ್ತರ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿ 53 ಮಂದಿಗೆ ಸೋಂಕು ಪತ್ತೆಯಾಗಿದ್ದು ರಾಜ್ಯದಲ್ಲೂ ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ ಮಾಡಿಸುವುದು ಸೂಕ್ತಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ಪತ್ರಕರ್ತರ ಆರೋಗ್ಯ ತಪಾಸಣೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರ ಕೋರಿ ಪತ್ರ ಬರೆದಿದ್ದಾರೆ. ಈ ಕಾರ್ಯಕ್ಕಾಗಿ ಸಮನ್ವಯ ಅಧಿಕಾರಿಯನ್ನೂ ನೇಮಿಸಿದ್ದಾರೆ. ಇದರ ನಡುವೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಮಾಧ್ಯಮದವರು ಜಾಗ್ರತೆ ವಹಿಸಲು ಕಿವಿಮಾತು ಹೇಳಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ತಾವೂ ಸಹ ಜೀವದ ಹಂಗು ತೊರೆದು ಜನತೆ ಹಾಗೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೀರಿ. ಕರ್ತವ್ಯದ ವೇಳೆ ಗಡಿಬಿಡಿಯಲ್ಲಿ ಆರೋಗ್ಯದ ಬಗ್ಗೆ ಎಚ್ಚರ ತಪ್ಪಬಾರದೆಂಬುದು ಕಾಳಜಿ. ಆರೋಗ್ಯ ತಪಾಸಣೆಗೊಳಗಾಗಿ ಎಚ್ಚರ ವಹಿಸಲು ವಿನಂತಿಸುವೆ ಎಂದು ಹೇಳಿದ್ದಾರೆ.