18+ ಲಸಿಕೆ ನಾಳೆ ಮತ್ತೆ ಆರಂಭ
Team Udayavani, May 21, 2021, 7:30 AM IST
ಬೆಂಗಳೂರು: ರಾಜ್ಯದಲ್ಲಿ 18-44 ವರ್ಷ ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಮೇ 22ರಿಂದ ಕೋವಿಡ್ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಲಸಿಕೆ ಕೊರತೆಯಿಂದ 18-44 ವರ್ಷ ದವರ ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತವಾಗಿತ್ತು. ಸದ್ಯ ಮೇ 15ರಂದು ನಡೆದ ತಜ್ಞರ ಸಮಿತಿ ಸಭೆಯ ತೀರ್ಮಾನದಂತೆ ಕೊರೊನಾ ಮುಂಚೂಣಿ ಕಾರ್ಯಕರ್ತರು ಆದ್ಯತಾ ವಲಯದ 18ರಿಂದ 44 ವರ್ಷ ದವರಿಗೆ ಲಸಿಕೆ ನೀಡಬಹುದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಅವರು ಆದ್ಯತಾ ವಲಯವನ್ನು ಗುರುತಿ ಸುವುದು, ಪ್ರಮಾಣ ಪತ್ರ ನೀಡುವುದು, ಲಸಿಕಾ ಸ್ಥಳವನ್ನು ಗುರುತಿ ಸುವುದು ಸಹಿತ ಲಸಿಕೆಯ ಸಂಪೂರ್ಣ ಉಸ್ತುವಾರಿ ನಿರ್ವಹಿಸ ಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಮುಂಚೂಣಿ ಕಾರ್ಯಕರ್ತರು :
ಅಂಗವಿಕಲರು ಮತ್ತು ಅವರ ಒಬ್ಬ ಆರೈಕೆದಾರರು, ಕೈದಿಗಳು, ಚಿತಾ ಗಾರ, ರುದ್ರಭೂಮಿ ಸಿಬಂದಿ, ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರು, ಸರಕಾರಿ ಸಾರಿಗೆ ಸಿಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಸಿಬಂದಿ, ಬೀದಿಬದಿ ವ್ಯಾಪಾರಿಗಳು, ಕಚೇರಿಗಳ ಭದ್ರತಾ ಮತ್ತು ಹೌಸ್ಕಿಪಿಂಗ್ ಸಿಬಂದಿ, ನ್ಯಾಯಾಂಗ ಅಧಿ ಕಾರಿ ಗಳು, ವಯೋವೃದ್ಧರು ಮತ್ತು ರೋಗಿಗಳ ಆರೈಕೆದಾರರು, ಮಹಿಳಾ ಮಕ್ಕಳ ಇಲಾಖೆ, ಪೆಟ್ರೋಲ್ ಬಂಕ್, ಗ್ಯಾಸ್ ಸಿಬಂದಿ, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವವರು, ಔಷಧ ಕಂಪೆನಿ ಸಿಬಂದಿ, ನಿರ್ಗತಿಕರು, ವೃದ್ಧಾ ಶ್ರಮ ವಾಸಿಗಳು, ಎಪಿಎಂಸಿ ಕೆಲಸಗಾರರು.
ಆದ್ಯತಾ ಗುಂಪಿನಲ್ಲಿ ಯಾರಿದ್ದಾರೆ? :
ಕಟ್ಟಡ ಕಾರ್ಮಿಕರು, ಟೆಲಿಕಾಂ ಇಂಟರ್ನೆಟ್ ಸೇವಾದಾರರು, ವಿಮಾನ ಸಂಸ್ಥೆ ಸಿಬಂದಿ, ಬ್ಯಾಂಕ್ ಸಿಬಂದಿ, ವಕೀಲರು, ಚಿತ್ರರಂಗ ಸಿಬಂದಿ, ಹೊಟೇಲ್ ಸಿಬಂದಿ, ಕೆಎಂಎಫ್ ಸಿಬಂದಿ, ಗಾರ್ಮೆಂಟ್ಸ್ ನೌಕರರು, ರೈಲ್ವೇ ಸಿಬಂದಿ, ಅರಣ್ಯ ಇಲಾಖೆ ಸಿಬಂದಿ, ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಟಗಾರರು, ಗೇಲ್, ಎಚ್ಎಎಲ್, ಎಚ್ಎಎಲ್ ಸಿಬಂದಿ.