ಗೋಮಾಂಸ ಅಡ್ಡೆ ಮೇಲೆ ಬುಲ್ಡೋಜರ್ ದಾಳಿ ಸಮರ್ಥಿಸಿಕೊಂಡ ಸಿ.ಟಿ ರವಿ
ಅನಾಗರಿಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ದಂಡಂ ದಶಗುಣಂ
Team Udayavani, Jun 15, 2022, 4:34 PM IST
ಚಿಕ್ಕಮಗಳೂರು : ನಗರಸಭೆಯಿಂದ ಅಕ್ರಮ ಗೋಮಾಂಸ ಅಡ್ಡೆ ಮೇಲೆ ಬುಲ್ಡೋಜರ್ ದಾಳಿ ಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್ ವಿರೋಧಕ್ಕೆ ತೀವ್ರವಾಗಿ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕಾನೂನು ಪಾಲಿಸುತ್ತಾರೋ ಅವರಿಗೆ ಕಾನೂನು ಪಾಠ. ಅನಾಗರಿಕರಂತೆ ವರ್ತಿಸುವವರನ್ನು, ಕಾನೂನು ಕೈಗೆತ್ತಿಕೊಳ್ಳುವವರನ್ನು ಅವರದ್ದೇ ರೀತಿಯಲ್ಲಿ ಪಾಠ ಕಲಿಸಲಾಗುತ್ತದೆ.ಪ್ರತಿಭಟನೆ ನೆಪದಲ್ಲಿ ದಂಗೆ ಎಬ್ಬಿಸುವರನ್ನ, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವವರಿಗೆ ಅವರದ್ದೇ ರೀತಿಯಲ್ಲಿ ಪಾಠ, ಸಭ್ಯರಿಗೆ ಸಭ್ಯತೆಯ ಪಾಠ, ಅನಾಗರಿಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ದಂಡಂ ದಶಗುಣಂ ಪಾಠ ಎಂದರು.
ಬುಲ್ಡೋಜರ್ ಹತ್ತಿಸಿದರೆ ನಾನೇ ಹೋಗಿ ಮಲಗುತ್ತೇನೆ ಎಂಬ ಡಿ.ಕೆ.ಶಿವಕುಮಾರ ಅವರ ಹೇಳಿಕೆಗೆ ಟಾಂಗ್ ನೀಡಿ, ಕಾಂಗ್ರೆಸ್ ನೀತಿ ಭ್ರಷ್ಟಾಚಾರಿಗಳ, ಮತಾಂತರಿಗಳ ಪರವಾಗಿ ನಿಲ್ಲುವುದು. ಅಕ್ರಮ ಗೋಹತ್ಯೆ ಮಾಡುವವರ ಪರ. ಇದೇ ನಮ್ಮ ನೀತಿ ಅನ್ನೋದನ್ನ ಕಾಂಗ್ರೆಸ್ ಸಾಬೀತುಪಡಿಸಲಿ. ಆ ಬಳಿಕ ಬಂದು ಬುಲ್ಡೋಜರ್ ಎದುರುಗಡೆ ನಿಂತುಕೊಳ್ಳಲಿ. ಉತ್ತರಪ್ರದೇಶದಲ್ಲಿ ಹೇಗೆ ಡಿಪಾಸಿಟ್ ಕಳೆದುಕೊಂಡರೋ ಇಲ್ಲಿಯೂ ಹಾಗೆ ಆಗುತ್ತದೆ. ಅವರು ಅಕ್ರಮ ಗೋಹತ್ಯೆಯನ್ನ ಸಮರ್ಥನೆ ಮಾಡಿಕೊಳ್ಳಲಿ, ಕಾನೂನು ತನ್ನ ಕೆಲಸವನ್ನು ಮಾಡುತ್ತದೆ ಎಂದರು.
ಇದನ್ನೂ ಓದಿ : ಬುಲ್ಡೋಜರ್ ಬಳಸಿದರೆ ಚಿಕ್ಕಮಗಳೂರಿಗೆ ಹೋಗಿ ಮಲಗುತ್ತೇವೆ: ಡಿಕೆಶಿ ಕಿಡಿ
ಬಿ.ವಿ.ಶ್ರೀನಿವಾಸ್ ಗೆ ಟಾಂಗ್
ಬೂಟ್ ನೆಕ್ಕುವ ಸಂಸ್ಕೃತಿ ಇರುವುದು ಕಾಂಗ್ರೆಸ್ ನಲ್ಲಿ, ಅಂತಹವರು ಮಾತ್ರ ಉಳಿದುಕೊಳ್ಳುತ್ತಾರೆ ಅಲ್ಲಿ. ಗುಲಾಮಗಿರಿ ಮಾನಸಿಕತೆಯಲ್ಲಿರುವರು. ನಾನು ಗುಲಾಮಗಿರಿಯ ಮಾನಸಿಕತೆಯವನಲ್ಲ. ಚಿಕ್ಕಮಗಳೂರಿನಲ್ಲಿ ಒಬ್ಬನೂ ಬಿಜೆಪಿ ಶಾಸಕ ಇರಲಿಲ್ಲ.ರಾಜ್ಯದಲ್ಲಿ ಕೇವಲ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಇದ್ದಾಗ ನಾನು ಬಿಜೆಪಿ ಸೇರಿದ್ದು. ಜನಸಂಘಟನೆ, ಹೋರಾಟ ಮಾಡಿ ಶಾಸಕನಾಗಿದ್ದೇನೆ. ಯಾರದ್ದೋ ಬಕೆಟ್ ಹಿಡಿದು ಚೇಲ ರಾಜಕಾರಣ ಮಾಡಿದವನಲ್ಲ ನಾನು. ಬೂಟು ನೆಕ್ಕುವ ರಾಜಕಾರಣದ ಕಲ್ಚರ್ ಬಿಜೆಪಿಯಲ್ಲಿ ಇಲ್ಲಬಿಜೆಪಿಯಲ್ಲಿ ಪಕ್ಷ ನಿಷ್ಠೆ, ಪರಿಶ್ರಮ ಯಾವ ಎತ್ತರಕ್ಕೆ ಬೇಕಾದರೂ ಬೆಳೆಯುತ್ತಾನೆ. ಬಹುಶಃ, ಬಿ.ವಿ.ಶ್ರೀನಿವಾಸ್ ಗೆ ನನ್ನ ಹಿನ್ನೆಲೆ ಗೊತ್ತಿಲ್ಲ ಅನಿಸುತ್ತದೆ ಎಂದು ಕಿಡಿ ಕಾರಿದರು.