ಕೋವಿಡ್ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದ್ದರು : ಸಿ.ಟಿ ರವಿ
Team Udayavani, May 4, 2021, 2:44 PM IST
ಚಿಕ್ಕಮಗಳೂರು : ಬಿಜೆಪಿಯವರು ವ್ಯಾಕ್ಸಿನ್ ಅನ್ನು ಜೀವ ತೆಗೆಯುವುದಕ್ಕೆ ಮಾಡಿದ್ದಾರೆ, ಈ ವ್ಯಾಕ್ಸಿನ್ ತಗೊಂಡ್ರೆ ಮಕ್ಕಳಾಗಲ್ಲ ಅಂತಾ ಅಪಪ್ರಚಾರ ಮಾಡಿ, ಆಮೇಲೆ ಅವರೇ ಕದ್ದು ಹೋಗಿ ವ್ಯಾಕ್ಸಿನ್ ತಗೊಂಡ್ರು. ಆದರೆ ಜನರು ಸಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ವ್ಯಾಕ್ಸಿನ್ ಕುರಿತು ರಾಜಕೀಯ ಅಪಪ್ರಚಾರ ಮಾಡಿದ್ರು. ಈಗ ವ್ಯಾಕ್ಸಿನ್ ಗೆ ಬೇಡಿಕೆಯಿದೆ, ಈ ಹಿಂದೆ ಟಾರ್ಗೆಟ್ ರೀಚ್ ಆಗ್ತಿರಲಿಲ್ಲ. ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೇ ವೇಸ್ಟ್ ಆಗಿದೆ. ಇದಕ್ಕೆಲ್ಲ ಕಾರಣ ರಾಜಕೀಯ ಮುಖಂಡರು ಅನುಮಾನ ಹುಟ್ಟುಹಾಕಿದ್ದು ಎಂದರು. ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಟಿಯಾಗಿದೆ ಇದರ ಹೊಣೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದರು.
ಇನ್ನು ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಮಾತನಾಡಿರುವ ಅವರು, ಬಂಗಾಳದಲ್ಲಿ 6 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಹತ್ಯಾ ರಾಜಕೀಯ ವಿರೋಧಿಸಿ ನಾಳೆ ಬಿಜೆಪಿಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
280ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪ.ಬಂಗಾಳದ ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. ಹತ್ಯಾ ರಾಜಕಾರಣವನ್ನು ಮುಂದುವರಿಸುವ ಕೆಲಸ ಟಿಎಂಸಿ ಮಾಡುತ್ತಿದೆ ಎಂದು ಸಿಟಿ ರವಿ ಆರೋಪ ಮಾಡಿದ್ದಾರೆ.