ಸದ್ಯವೇ ಡಿಕೆಶಿಗೆ ಸಮನ್ಸ್?: ಸಿಬಿಐ ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ
Team Udayavani, Oct 7, 2020, 6:47 AM IST
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಸದ್ಯದಲ್ಲಿಯೇ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಸದ್ಯ ಡಿ.ಕೆ.ಶಿ. ಮತ್ತು ಅವರ ಕುಟುಂಬಿಕರಿಗೆ ಸಂಬಂಧಿಸಿದ ಬೆಂಗಳೂರು, ಮುಂಬಯಿ, ದಿಲ್ಲಿ, ಹಾಸನ ಸಹಿತ 14 ಕಡೆ ದೊರೆತಿರುವ ದಾಖಲೆಗಳ ಕ್ರೋಡೀಕರಣ ನಡೆಯುತ್ತಿದೆ.
ಪ್ರಾಥಮಿಕ ತನಿಖೆಯಲ್ಲಿ ಸಿಬಿಐಯು ಅಕ್ರಮ ಆದಾಯ ಗಳಿಕೆ ಸಂಬಂಧದ ದಾಖಲೆಗಳು ಮತ್ತು ಶೋಧದ ವೇಳೆ ಲಭಿಸಿರುವ ದಾಖಲೆಗಳನ್ನು ಪರಿಶೀಲಿಸಲಿದೆ. ಬಳಿಕ ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿ., ಸೋದರ ಸಂಬಂಧಿ ಶಶಿಕುಮಾರ್, ಆಪ್ತ ಆಂಜನೇಯ ಅವರಿಗೆ ಸದ್ಯದಲ್ಲಿಯೇ ಸಮನ್ಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದೇ ವೇಳೆ ತನ್ನ ಆಪ್ತ ಸಹಾಯಕನಿಗೆ ಸಿಬಿಐ ಅಧಿಕಾರಿಗಳು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಡಿ.ಕೆ.ಶಿ. ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಯಾವುದೂ ರಹಸ್ಯವಾಗಿಲ್ಲ
ರಾಜಕಾರಣದಲ್ಲಿ ಯಾವುದನ್ನೂ ಗೌಪ್ಯವಾಗಿರಿಸಲು ಸಾಧ್ಯವಿಲ್ಲ. ಡಿ.ಕೆ. ಸುರೇಶ್ ಅವರ ದಿಲ್ಲಿ ನಿವಾಸದಲ್ಲಿ 1.50 ಲಕ್ಷ ರೂ., ನಮ್ಮ ಮನೆಯಲ್ಲಿ 1.77 ಲಕ್ಷ ರೂ., ಕಚೇರಿಯಲ್ಲಿ 3.50 ಲಕ್ಷ ರೂ. ಸಿಕ್ಕಿದೆ. ಊರಿನಲ್ಲಿ ಯಾವುದೇ ಹಣ ಸಿಕ್ಕಿಲ್ಲ ಎಂದು ಡಿ.ಕೆ. ಶಿವ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಿಬಿಐ ದಾಳಿಯಲ್ಲಿ 57 ಲಕ್ಷ ರೂ. ದೊರೆತಿದೆ ಎಂಬ ಸಿಬಿಐ ಹೇಳಿಕೆಗೆ ಅವರು ಸ್ಪಷ್ಟೀಕರಣ ನೀಡಿದರು. ಸ್ನೇಹಿತ ಸಚಿನ್ ನಾರಾಯಣ ಮನೆಯಲ್ಲಿ ಅವರ ವ್ಯವಹಾರಕ್ಕೆ ಸಂಬಂಧಿಸಿದ 50 ಲಕ್ಷ ರೂ. ಸಿಕ್ಕಿದೆಯಂತೆ.
ಧವನಂ ಬಿಲ್ಡರ್ಸ್ ಅವರಿಂದ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ಮುಂಬಯಿಯ ಮನೆ ಮಗಳ ಹೆಸರಿನಲ್ಲಿದೆ. ದಿಲ್ಲಿಯ ಮನೆಯಲ್ಲಿ ಏನೂ ಇಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದರು.