ಬಿಜೆಪಿಯನ್ನು ಬೆಂಬಲಿಸಲು ಆಗುತ್ತಾ? ಜಾತ್ಯಾತೀತ ನಿಲುವನ್ನೇ ಬೆಂಬಲಿಸಬೇಕು: ಡಿಕೆ ಶಿವಕುಮಾರ್
Team Udayavani, Jun 7, 2020, 1:16 PM IST
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ. ಜೆಡಿಎಸ್ ಪಕ್ಷದ ಬೆಂಬಲದ ಬಗ್ಗೆ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಅಷ್ಟಕ್ಕೂ ನಾವು ಬಿಜೆಪಿಯನ್ನೇನು ಬೆಂಬಲಿಸೋಕೆ ಆಗುತ್ತದಾ? ಜಾತ್ಯಾತೀತ ನಿಲುವನ್ನೇ ಬೆಂಬಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ನಮ್ಮಪಕ್ಷದ ಕಚೇರಿಯಲ್ಲಿ ಶಾಸಕರ ಸಭೆಯಿದೆ. ಸಭೆಯ ಬಳಿಕ ನಾವು ನಾಮಪತ್ರ ಸಲ್ಲಿಸುತ್ತೇವೆ. ಕೆಲವೇ ನಾಯಕರು ಇದರಲ್ಲಿ ಭಾಗವಹಿಸುತ್ತೇವೆ. ಕಾರ್ಯಕರ್ತರು ಬರದಂತೆ ನಾವು ಮನವಿ ಮಾಡಿದ್ದೇವೆ. ಬಂದರೂ ವಿಧಾನಸೌಧದಲ್ಲಿ ಅವಕಾಶವಿಲ್ಲ ಎಂದ ಅವರು ಚುನಾವಣಾ ರಿಸಲ್ಟ್ ಬಂದ ನಂತರ ಎಲ್ಲರೂ ಸಂಭ್ರಮಾಚರಣೆ ಮಾಡುತ್ತೇವೆ ಎಂದರು.
ಪದಗ್ರಹಣ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಜೂನ್ 14 ರಂದು ಪದಗ್ರಹಣ ಕಾರ್ಯಕ್ರಮವಿದೆ. ಇದಕ್ಕೆ ಸಿಎಂ ಬಳಿ ಅನುಮತಿ ಕೇಳಿದ್ದೇನೆ. ಅವರು ಅನುಮತಿ ಕೊಟ್ಟರೆ ಸರಳವಾಗಿ ಕಾರ್ಯಕ್ರಮ ನಡೆಸುತ್ತೇವೆ. ನಾವೇನು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲ್ಲ ಎಂದರು.
ಕೇವಲ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಗ್ರಾಮಪಂಚಾಯತಿಗಳಲ್ಲೇ ಕಾರ್ಯಕ್ರಮ ಆಯೋಜಿಸಿದ್ದೇವೆ. ಹೀಗಾಗಿ ಕಾರ್ಯಕರ್ತರು ಯಾರು ಇಲ್ಲಿಗೆ ಬರಬಾರದು. ಕೇವಲ ಶಾಸಕರು, ಗಣ್ಯರಿಗೆ ಮಾತ್ರ ಅವಕಾಶವಿದೆ ಹಾಗಾಗಿ ಅವರಿಗೆ ಪಾಸ್ ವ್ಯವಸ್ಥೆ ಮಾಡ್ತೇವೆ ಎಂದರು