ದಲಿತರು ಸಿಎಂ ಆಗದಿರಲು ಒಗ್ಗಟ್ಟಿಲ್ಲದಿರುವುದೇ ಕಾರಣ
Team Udayavani, Aug 19, 2019, 3:00 AM IST
ಕೋಲಾರ: ಕರ್ನಾಟಕದ ಜಾತಿ ಗಣತಿಯ ಸೋರಿಕೆ ಅಂಶಗಳ ಪ್ರಕಾರ ದಲಿತರೇ ನಂಬರ್ ಒನ್. ಹೀಗಿದ್ದಾಗಲೂ ದಲಿತ ಮುಖ್ಯಮಂತ್ರಿಗೆ ಇಂದಿಗೂ ಹೋರಾಟ ನಡೆಯುತ್ತಿದೆ ಎಂದರೆ ದಲಿತರು ಒಗ್ಗಟ್ಟಾಗದಿರುವುದೇ ಕಾರಣ ಎಂದು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಸಮ್ಮೇಳನಾಧ್ಯಕ್ಷರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಅಸ್ಪ್ರಶ್ಯತೆ ಇನ್ನೂ ಇದೆ. ದೇಶದಲ್ಲಿ ಅಸ್ಪ್ರಶ್ಯತೆ ಇಲ್ಲದ 50 ಗ್ರಾಮಗಳನ್ನು ಹುಡುಕಲು ಸಾಧ್ಯವಿಲ್ಲ. ತಾವೇ ತಮ್ಮ ಊರಿನ ದೇವಾಲಯಕ್ಕೆ ಪ್ರವೇಶ ಪಡೆಯಲು 60 ವರ್ಷ ಕಾಯಬೇಕಾಯಿತು. ತೀರಾ ಇತ್ತೀಚೆಗೆ ದೇವಾಲಯಕ್ಕೆ ಹೋದೆ ಎಂದರು.
ಈಗಾಗಲೇ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕಿತ್ತು. ಮುಂದಿನ ದಿನಗಳಲ್ಲಿ ಪರಿಸ್ಥಿತಿಯೇ ದಲಿತ ಮುಖ್ಯಮಂತ್ರಿಯನ್ನು ಮಾಡಬಹುದು ಎಂದರು. ಆಗ ಸಭಿಕರಲ್ಲಿದ್ದ ಬಿ.ಟಿ.ಲಲಿತಾನಾಯಕ್ ಅದು ನೀವೇ ಆಗಬಹುದು ಎಂದಾಗ, ನಿಮ್ಮ ಆಸೆ ಈಡೇರಲಿ ಎಂದರು.