ಸಂತ್ರಸ್ತರಿಗಾಗಿ ಅಜ್ಜನ ಅಂತ್ಯಕ್ರಿಯೆಗೂ ಹೋಗದ ಡೀಸಿ!
Team Udayavani, Aug 14, 2019, 3:06 AM IST
ವಿಜಯಪುರ: ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ಎರಡೂ ನದಿಗಳು ಕಳೆದೊಂದು ವಾರದಿಂದ ಪ್ರವಾಹ ಸೃಷ್ಟಿಸಿದ್ದು, ಸಾವಿ ರಾರು ಜನರನ್ನು ಸಂತ್ರಸ್ತರ ನ್ನಾಗಿಸಿವೆ. ನೆರೆ ಬಾ ಧಿತರ ನೆರವಿನ ಕರ್ತವ್ಯದಲ್ಲಿರುವ ವಿಜಯಪುರ ಜಿಲ್ಲಾಧಿಕಾರಿ ಅವರ ಅಜ್ಜ ಮೃತಪಟ್ಟರೂ ಅಂತ್ಯಕ್ರಿಯೆಗೂ ಹೋಗದೆ ಸಂತ್ರಸ್ತರ ಕಣ್ಣೀರು ಒರೆಸುವ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಅಜ್ಜ ಮಲ್ಲನಾಯ್ಕನಾಯ್ಕರ ಅವರು ಬೆಳಗಾವಿ ಜಿಲ್ಲೆ ನಾಗನೂರು ಗ್ರಾಮದಲ್ಲಿ ಆ.9ರಂದು ನಿಧನರಾಗಿದ್ದರು.
ಈ ಸಂದರ್ಭದಲ್ಲಿ ಕೃಷ್ಣಾ ನದಿ ತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಕೃಷ್ಣಾ ನದಿ ಪಾತ್ರದ ಮುದ್ದೇಬಿಹಾಳ ತಾಲೂಕಿನಲ್ಲಿ ವೈ.ಎಸ್. ಪಾಟೀಲ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ಹಂತದಲ್ಲೇ ತಮ್ಮ ತಾಯಿಯ ತಂದೆ ಮಲ್ಲನಾಯ್ಕ ಇಹಲೋಕ ತ್ಯಜಿಸಿದ ಸುದ್ದಿ ಬಂತು. ಆದರೆ ಸಂತ್ರಸ್ತರ ಕರ್ತವ್ಯದಲ್ಲಿ ವೈ.ಎಸ್. ಪಾಟೀಲ ಅಜ್ಜನ ಅಂತ್ಯಕ್ರಿಯೆಗೆ ಹೋಗದೇ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದ ಜನರ ನೆರವಿಗೆ ನಿಂತಿದ್ದರು.
ಇಡೀ ಜಿಲ್ಲೆ ತಮ್ಮತ್ತ ನೋಡುತ್ತಿದೆ. ಅದರಲ್ಲೂ ಪ್ರವಾಹದಿಂದಾಗಿ ಬದುದನ್ನು ಕಳೆದುಕೊಂಡು ನೆಲೆ ಇಲ್ಲದಂತಿರುವ ಪ್ರವಾಹ ಬಾಧಿತ ಜನರ ಕಣ್ಣೀರು ಒರೆಸುವ ಮೂಲಕ ಬಾಲ್ಯದಲ್ಲಿ ತಮ್ಮನ್ನು ಎತ್ತಿ-ಆಡಿಸಿ ಬೆಳೆಸಿದ ಅಜ್ಜನಿಗೆ ವಿಶಿಷ್ಟ ರೀತಿಯ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ರಜೆ ರಹಿತ ಕರ್ತವ್ಯಕ್ಕೆ ಸೂಚಿಸಲಾಗಿದೆ. ಮತ್ತೂಂದೆಡೆ ಸಂತ್ರಸ್ತರು ಎಲ್ಲ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅಜ್ಜನ ಅಂತ್ಯಕ್ರಿಯೆಗೆ ಹೋಗುವುದನ್ನೇ ಬಿಟ್ಟು ಕರ್ತವ್ಯ ಪ್ರಜ್ಞೆ ಮೆರೆದಿದ್ದು ವಿಶೇಷ. ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.