ಹುಟ್ಟುಹಬ್ಬ ಆಚರಿಸಿಕೊಂಡ ಡಿಸಿಎಂ ಅಶ್ವತ್ಥ ನಾರಾಯಣ
Team Udayavani, Feb 3, 2020, 3:03 AM IST
ಬೆಂಗಳೂರು: 51ನೇ ವರ್ಷಕ್ಕೆ ಕಾಲಿಟ್ಟ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ.
ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಸಂಸದರಾದ ಪಿ.ಸಿ ಮೋಹನ್, ಬಿ.ವೈ.ರಾಘವೇಂದ್ರ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಸಿ.ಟಿ ರವಿ, ನಟ ಜಗ್ಗೇಶ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿ ಹಲವು ಗಣ್ಯರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಸಂಭ್ರಮಾಚರಣೆ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಂತರ ಕ್ಷೇತ್ರದ ಜನತೆಯೊಂದಿಗೆ ಸಂಭ್ರಮಾ ಚರಣೆಯಲ್ಲಿ ಭಾಗಿಯಾದರು. ಈಜುಕೊಳ ಬಡಾವಣೆಯ ರಾಮದೇವ ಪಾರ್ಕ್, ಮಲ್ಲೇಶ್ವರದ ಸ್ಯಾಂಕಿ ಕೆರೆಯ ಆವರಣ, ದಿವಾನರಪಾಳ್ಯದ ಅಟಲ್ ಜೀ ಪಾರ್ಕ್ ಮತ್ತು ಗಣೇಶ ಮಂದಿರ, ಮತ್ತಿಕೆರೆಯ ನೇತಾಜಿ ಸರ್ಕಲ್, ಯಶವಂತಪುರದ ಆರ್ಟಿಒ ಕಾಂಪ್ಲೆಕ್ಸ್, ಸುಬ್ರಮಣ್ಯ ನಗರದ ಬಿಜೆಪಿ ಕಚೇರಿ ಯಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಜನ್ಮ ದಿನದ ಶುಭಾಶಯ ಕೋರಿದರು.
ಶಕ್ತಿ ನೀಡಬೇಕು: ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ, ನಾಡಿನ ಜನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಬಹಳ ಸಂತೋಷ ತಂದಿದೆ. ಈ ದೊಡ್ಡ ಜವಾಬ್ದಾರಿ ನಿಭಾಯಿಸಲು ನನಗೆ ಭಗವಂತ ಶಕ್ತಿ ನೀಡಬೇಕು ಎಂದಿರುವ ಡಾ. ಅಶ್ವತ್ಥನಾರಾಯ ಣ ಅವರು, ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.