ಶ್ರೀರಾಮುಲುರನ್ನು ಡಿಸಿಎಂ ಮಾಡಿ: ನಿರಾಣಿ
Team Udayavani, Aug 28, 2019, 3:00 AM IST
ಬಾಗಲಕೋಟೆ: ಶ್ರೀರಾಮುಲು ಅವರು ಕರ್ನಾಟಕ ಕಂಡ ಉತ್ಸಾಹಿ ರಾಜಕಾರಣಿ ಮತ್ತು ಹಿಂದುಳಿದ ವರ್ಗಗಳ ಹಾಗೂ ವಾಲ್ಮೀಕಿ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರಲ್ಲಿ ಉತ್ತಮ ಸಂಘಟನಾ ಕೌಶಲ್ಯವಿದ್ದು, ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಮಾಜಿ ಸಚಿವ, ಬೀಳಗಿಯ ಬಿಜೆಪಿ ಶಾಸಕ ಮುರಗೇಶ ನಿರಾಣಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀರಾಮುಲು ಅವರು ರಾಜ್ಯದ ಬಡವರು, ಶೋಷಿತರು ಹಾಗೂ ದೀನ ದಲಿತರಿಗೆ ಸಮರ್ಥ ಧ್ವನಿಯಾಗುವ ಭರವಸೆಯ ನೇತಾರರಾಗಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದಲ್ಲಿ ರಾಜ್ಯಕ್ಕೆ ಮತ್ತು ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ. ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಹಿರಿಯರು ಅವರ ಸೇವೆಯನ್ನು ಗುರುತಿಸಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.