“ಡಿಸಿಎಂ, ಸಚಿವ ಸ್ಥಾನ ಕೇಳೋದು ತಪ್ಪಲ್ಲ’
Team Udayavani, Jan 15, 2020, 3:06 AM IST
ದಾವಣಗೆರೆ: ಸಚಿವ ಸ್ಥಾನ ನೀಡುವಂತೆ ಸ್ವಾಮೀಜಿಗಳು ಕೇಳುವುದು ಸರಿಯಾಗಿಯೇ ಇದೆ. ಅವರ ಬೇಡಿಕೆ ಏನೂ ತಪ್ಪಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮಂಗಳವಾರ ನಗರದ ಜಿಎಂಐಟಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿವಿಧ ಮಠಾಧೀಶರು ತಮ್ಮ ಸಮಾಜದ ಶಾಸಕರಿಗೆ ಸಚಿವ ಸ್ಥಾನ, ಡಿಸಿಎಂ ಮಾಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತಿದ್ದಾರೆ. ರಾಜಕಾರಣದಲ್ಲಿ ಇದು ಹೊಸದೇನಲ್ಲ. ಸ್ವಾಮೀಜಿ ಗಳು ಕೇಳುವುದು ಸರಿಯಾಗಿಯೇ ಇದೆ. ತಮ್ಮ ಸಮಾಜದವರ ಅಭಿಪ್ರಾಯ ಹೇಳಲೇಬೇಕು.
ಹಾಗಾಗಿ ಹೇಳಿದ್ದಾರೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಯಾವಾಗ ತೀರ್ಮಾನ ಮಾಡುತ್ತಾರೋ ಆಗ ಮಾಡುತ್ತಾರೆ ಎಂದರು. ನೀವು ಡಿಸಿಎಂ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನನ್ನನ್ನು ನೋಡಿದರೆ ನಿಮ್ಗೆ ಹಂಗೆ ಅನಿಸುತ್ತಾ? ಎಂದು ಮಾಧ್ಯಮದವರನ್ನೇ ಕೇಳಿದರು. ಖಾತೆ ಬದಲಾವಣೆ ಬಗ್ಗೆ ಪ್ರಶ್ನಿಸಿದಾಗ, ನಾನು ಮೊನ್ನೆಯೇ ಹೇಳಿದ್ದೇನೆ, ಕೆಲಸ ಮಾಡುವವರಿಗೆ ಯಾವ ಖಾತೆ ಆದರೇನು ಅಂತ. ಯಾವುದು ಕೊಟ್ಟರೂ ತೃಪ್ತಿ ಆಗುವ ರೀತಿ ಕೆಲಸ ಮಾಡಬೇಕು ಎಂಬ ತತ್ವದ ಮೇಲೆ ನಂಬಿಕೆ ಇರುವವನು ನಾನು ಎಂದರು.