ಭೀಕರ ರಸ್ತೆ ಅಪಘಾತ: ಮೃತರ ಸಂಖ್ಯೆ 8ಕ್ಕೆ ಏರಿಕೆ
Team Udayavani, Nov 23, 2019, 3:00 AM IST
ನಾಗಮಂಗಲ: ಬೀದರ್ ಮತ್ತು ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಹೋಬಳಿಯ ರಾಮದೇವನಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಪಟ್ಟಣದ ನಿವಾಸಿಗಳಾದ ಬಾಕರ್ ಷರೀಫ್, ಮೆಹಬೂಬ್ ಖಾನ್, ನೌಸಾದ್ ಪಾಷಾ, ಮಕ್ಸೂದ್ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ತಾಹೀರ್ ಪಾಷಾ, ಅಕರ್ ಅಲಿ, ಹಸೀನ್ ತಾಜ್, ಶಾಹೆದಾ ಖಾನಂ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಮಕೂಲ್ ಅಹಮದ್ ಅವರ ಎರಡೂ ಕಾಲು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ಅಲ್ ಫಲಾಹ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಾದ 10 ಜನರು ತಮ್ಮ ಆಡಳಿತಾವಧಿ ಗುರುವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಬೆಳ್ಳೂರ್ ಕ್ರಾಸ್ ಕಡೆಗೆ ಕೆ.ಎ.33-ಎಮ್-0977 ನೋಂದಣಿಯ ಟಾಟಾ ಸುಮೋದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಮದೇವನಹಳ್ಳಿ ಗೇಟ್ ಸಮೀಪ ಎದುರಿನಿಂದ ಬಂದ 407 ಕ್ಯಾಂಟರ್ನ ಸ್ಟೇರಿಂಗ್ ಕಟ್ಟಾದ ಪರಿಣಾಮ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆದಿದೆ.