ಸಾಲಬಾಧೆ: ಇಬ್ಬರು ರೈತರು ಆತ್ಮಹತ್ಯೆ
Team Udayavani, Jul 1, 2019, 3:00 AM IST
ಯರಗಟ್ಟಿ/ಆನಂದಪುರ: ಪ್ರತ್ಯೇಕ ಪ್ರಕರಣದಲ್ಲಿ ಸಾಲಬಾಧೆ ತಾಳದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯರಗಟ್ಟಿ ಗ್ರಾಮದ ರೈತ ಲಕ್ಷ್ಮಪ್ಪ ಹನಮಂತಪ್ಪ ಕೊಪ್ಪದ (65) ತನ್ನ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮಪ್ಪ 5 ಎಕರೆ ಜಮೀನು ಹೊಂದಿದ್ದು, ಯರಗಟ್ಟಿ ಸಿಂಡಿಕೇಟ್ ಬ್ಯಾಂಕ್ನಲ್ಲಿ 3.5 ಲಕ್ಷ ಹಾಗೂ ಕೈಗಡವಾಗಿ 2 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.
ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಗ್ರಾಮದ ಮಂಜಪ್ಪ (50) ಕುಟುಂಬದಲ್ಲಿ ಇದ್ದ ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇವರ ತಾಯಿಯ ಹೆಸರಿನಲ್ಲಿ ಸಾಲವಿತ್ತು ಎನ್ನಲಾಗಿದೆ.
ಹಣವಿಲ್ಲದೆ ಕೃಷಿ ಮಾಡುವುದು ಕಷ್ಟವೆಂದು ಮನ ನೊಂದಿದ್ದ ಮಂಜಪ್ಪ 15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಮುಂಬಾಳು ರೈಲು ಹಳಿಯ ಸಮೀಪದ ಕಾಡಿನಲ್ಲಿ ಶವ ಕೊಳೆತ ವಾಸನೆ ಕಂಡ ಗ್ರಾಮಸ್ಥರು ಹೋಗಿ ನೋಡಿದಾಗ ಅದು ಮಂಜಪ್ಪನ ಶವ ಎಂದು ಗುರುತು ಸಿಕ್ಕಿದೆ. ಶವ ಪರೀಕ್ಷೆ ನಡೆಸಿದ್ದು ಸಾವಿಗೆ ಕಾರಣ ತಿಳಿಯಬೇಕಿದೆ.