ದೇಶದ್ರೋಹಿ ಘೋಷಣೆ: ಬಂಧನ
Team Udayavani, Mar 3, 2020, 3:02 AM IST
ಕುಂದಾಪುರ: ಇಲ್ಲಿನ ಮಿನಿವಿಧಾನಸೌಧದಲ್ಲಿ ಸೋಮವಾರ ಪಾಕಿಸ್ತಾನ ಜಿಂದಾಬಾದ್, ಆಜಾದಿ ಜಿಂದಾಬಾದ್ ಎಂದು ಘೋಷಣೆ ಹಾಕಿದ ಕುಂದಾಪುರ ಕೋಡಿ ಸರಕಾರಿ ಆಸ್ಪತ್ರೆ ಬಳಿಯ ರಾಘವೇಂದ್ರ ಗಾಣಿಗ (42)ನನ್ನು ಬಂಧಿಸಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ಮಿನಿ ವಿಧಾನಸೌಧದ ಮೆಟ್ಟಿಲುಗಳನ್ನು ಏರಿಬಂದ ರಾಘವೇಂದ್ರ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕಾರಿಡಾರ್ ಉದ್ದಕ್ಕೂ ಸಾಗಿದ.
ಇದನ್ನು ಸಾರ್ವಜನಿಕರು ವಿಡಿಯೋ ಮಾಡಿ ಪೊಲೀಸರಿಗೆ ಸುದ್ಧಿ ಮುಟ್ಟಿಸಿದರು. ಮಿನಿ ವಿಧಾನಸೌಧದ ಒಳಗೆ ಪ್ರವೇಶಿಸಿ ಅಲ್ಲಿಯೂ ಘೋಷಣೆ ಮುಂದುವರಿಸಿದ. ತಹಶೀಲ್ದಾರ್ ತಿಪ್ಪೇಸ್ವಾಮಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಲಿಖೀತ ದೂರು ನೀಡಿದರು. ಎಸ್ಐ ಹರೀಶ್ ಆರ್. ನಾಯ್ಕ ರಾಘವೇಂದ್ರನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಬಂಧನ ವೇಳೆಯೂ ನಿರಾತಂಕದಿಂದಿದ್ದ ಆತ “ನಾನು ಕುಂದಾಪುರದವನೇ’ ಎಂದು ಇಂಗ್ಲಿಷ್ನಲ್ಲಿ ಪೊಲೀಸರ ಜತೆ ಪ್ರತಿಕ್ರಿಯಿಸಿದ್ದಾನೆ.