ಬೀದರ್ನಲ್ಲಿ “ಉಡಾನ್’ ಅನುಷ್ಠಾನ ವಿಳಂಬ?
Team Udayavani, May 2, 2017, 11:13 AM IST
ಬೀದರ್: ಕೇಂದ್ರದ “ಉಡಾನ್’ ಯೋಜನೆಯಡಿ ಬೀದರ ವಿಮಾನ ನಿಲ್ದಾಣ ಸೇರ್ಪಡೆಯಿಂದ ವಿಮಾನ ಹಾರಾಟದ
ಕನಸು ಚಿಗುರೊಡೆದಿದೆ. ಆದರೆ, ಅದು ನನಸಾಗಲು ಇನ್ನಷ್ಟು ದಿನ ಕಾಯಲೇಬೇಕು. ಜಿಎಂಆರ್ ಕಂಪನಿ ಜತೆಗಿನ ಒಪ್ಪಂದ ವಿವಾದ ಪರಿಹಾರ ಮತ್ತು ಹಾಳು ಕೊಂಪೆಯಾದ ಏರ್ ಟರ್ಮಿನಲ್ ದುರಸ್ತಿ ಆಗಬೇಕಿದೆ.
ಪ್ರಾದೇಶಿಕ ಸಂಪರ್ಕ ಉತ್ತೇಜಿಸಲು ಬಳಕೆಯಾಗದೆ ಉಳಿದಿರುವ ಬೀದರ್ ಸೇರಿ ರಾಜ್ಯದ 4 ಮತ್ತು ದೇಶದ 39
ನಿಲ್ದಾಣಗಳನ್ನು ವಿಮಾನಯಾನ ಸಚಿವಾಲಯ “ಉಡಾನ್’ ಯೋಜನೆಯಡಿ (ಶ್ರೀಸಾಮಾನ್ಯನಿಗೂ ವಿಮಾನಯಾನ
ಯೋಗ) ಸದ್ಬಳಕೆಗೆ ಮುಂದಾಗಿದ್ದು, ಈಗಾಗಲೇ ಶಿಮ್ಲಾ- ದೆಹಲಿ ನಡುವೆ ವೈಮಾನಿಕ ಹಾರಾಟಕ್ಕೆ ಚಾಲನೆಯೂ ಸಿಕ್ಕಿದೆ.
ಪ್ರಸ್ತಾವನೆ ಸಲ್ಲಿಕೆ: ಮೊದಲ ಹಂತದಲ್ಲಿ ಕರ್ನಾಟಕದ ಬೀದರ್, ಬೆಂಗಳೂರು, ಮೈಸೂರು, ಬಳ್ಳಾರಿ ನಿಲ್ದಾಣಗಳಿಂದ ರಾಜ್ಯದ ಬೇರೆ ಪ್ರದೇಶಗಳಿಗೆ ವಿಮಾನ ಹಾರಾಟಕ್ಕೆ ವೈಮಾನಿಕ ಸಂಸ್ಥೆಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಉಡಾನ್ ಅನುಷ್ಠಾನ ಸಂಬಂಧ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಜೊತೆ ರಾಜ್ಯ ಸರ್ಕಾರ ಒಪ್ಪಂದವನ್ನೂ ಮಾಡಿಕೊಂಡಿದೆ. ಸೆಪ್ಟೆಂಬರ್ ವೇಳೆಗೆ ಬೀದರ್ನಿಂದಲೂ
ವಿಮಾನ ಸೇವೆ ಲಭ್ಯತೆ ಕುರಿತು ಘೋಷಿಸಲಾಗಿದೆ. ಆದರೆ, ಹಾರಾಟಕ್ಕೆ ಅಡ್ಡಿ ಆಗಿರುವ ವಿಮಾನ ಪ್ರಾಧಿಧಿಕಾರದ ಹಳೆ ಒಪ್ಪಂದ ವಿವಾದ ಮಾತ್ರ ಬಗೆಹರಿದಿಲ್ಲ.
ಜಿಎಂಆರ್ ತಕರಾರು: ವಾಯು ಸೇನಾ ತರಬೇತಿ ಕೇಂದ್ರ ಹೊಂದಿರುವ ಬೀದರ್ನಲ್ಲಿ ಕೇಂದ್ರದ ತಾತ್ಸಾರ ಹಾಗೂ
ರಾಜ್ಯ ಸರ್ಕಾರದ ನಿರ್ಲಕ್ಷದಿಂದ ವಿಮಾನ ಹಾರಾಟ ನನೆಗುದಿಗೆ ಬಿದ್ದಿತ್ತು. ಹೈದರಾಬಾದ್ನ ರಾಜೀವ್ ಗಾಂಧಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೀದರ್ನ ರಕ್ಷಣಾ ಇಲಾಖೆ ವಶದಲ್ಲಿರುವ ವಿಮಾನ ನಿಲ್ದಾಣ ಕೇವಲ
150 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದರಿಂದ ಹೈದರಾಬಾದ್ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆ
ತಕರಾರು ಎತ್ತಿ, ವಿಮಾನ ಹಾರಾಟಕ್ಕೆ ಈ ಹಿಂದಿನಿಂದಲೂ ಅಡ್ಡಗಾಲು ಹಾಕುತ್ತ ಬಂದಿದೆ.
ಎಲ್ಲವೂ ಹಾಳಾಗಿವೆ: ವಿಮಾನಯಾನ ಆರಂಭಕ್ಕಾಗಿ ಐದಾರು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಗುತ್ತಿಗೆ ಭೂಮಿ
ಪಡೆದು 3 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ನಿರ್ಮಿಸಿತ್ತು. ಕಟ್ಟಡ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿದಿದೆ. ಕಸ್ಟಮ್
ಅಧಿಕಾರಿಗಳ ಹಾಲ್, ಟ್ರಾμಕ್ ಆಪರೇಟರ್ ಕೊಠಡಿ, ವಿಶ್ರಾಂತಿ ಕೋಣೆ ಹೊಂದಿರುವ ಟರ್ಮಿನಲ್ ಸದ್ಯ ಭೂತ
ಬಂಗಲೆಯಂತಾಗಿವೆ. ಕಟ್ಟಡದ ಸುತ್ತಲೂ ಎದೆಯೆತ್ತರಕ್ಕೆ ಪೊದೆಗಳು ಬೆಳೆದು ನಿಂತಿವೆ. ಕೊಠಡಿಗಳು ಅಸ್ಥಿಪಂಜರದಂತೆ
ಬಾಯೆ¤ರೆದು ನಿಂತಿದ್ದು, ಜಂಗು ತಿಂದ ಬಾಗಿಲುಗಳು ಅನಾಥವಾಗಿ ತೆರೆದುಕೊಂಡಿವೆ.
– ಶಶಿಕಾಂತ ಬಂಬುಳಗೆ