ದೇವನಹಳ್ಳಿ ವಿಮಾನ ನಿಲ್ದಾಣ: ಲಗೇಜ್ ಬ್ಯಾಗ್ ಚಕ್ರದಲ್ಲಿ ಚಿನ್ನ ಸಾಗಣೆ !
ದುಬೈನಿಂದ ಆಗಮಿಸಿದ್ದ ಪ್ರಯಾಣಿಕ
Team Udayavani, Sep 23, 2022, 9:27 PM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಪಾಸಣೆ ಮಾಡುತ್ತಿದ್ದ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನವನ್ನು ಸಾಗಿಸಲು,ಲಗೇಜ್ ಬ್ಯಾಗಿನ ಚಕ್ರಗಳಲ್ಲಿ ತುಂಡು, ತುಂಡಾಗಿ ಚಿನ್ನವನ್ನು ಆರೋಪಿಯು ಶೇಖರಣೆ ಮಾಡಿದ್ದು, ಬ್ಯಾಗ್ನ ಚಕ್ರದಲ್ಲಿ ಚಿನ್ನದ ತುಂಡುಗಳು ಹಾಗೂ ಅದರ ಪೌಚ್ನಲ್ಲಿ ಚಿನ್ನದ ಕಾಯಿನ್ ಮತ್ತು ಸರವನ್ನು ಮುಚ್ಚಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಾಡಹಬ್ಬ ದಸರಾ ಮಹೋತ್ಸವದ ಅಂತಿಮ ಸುತ್ತಿನ ಫಿರಂಗಿ ತಾಲೀಮು
ಎಲ್ಲ ಚಿನ್ನದ ವಸ್ತುಗಳು ವಿದೇಶಿ ಮೂಲದ್ದು ಎಂದು ತಿಳಿದು ಬಂಧಿದ್ದು ಬಂಧಿತನಿಂದ ಒಟ್ಟು 142.1 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯವು 7.38 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಪ್ರಗತಿಯಲ್ಲಿದೆ.
ಮಕ್ಕಳ ಬಟ್ಟೆ ಗುಂಡಿಯಲ್ಲೂ ಚಿನ್ನ
ನಡೆಸುವ ಸಮಯದಲ್ಲಿ ಮಕ್ಕಳ ಬಟ್ಟೆ ಗುಂಡಿಯಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.
ಬ್ಯಾಂಕಾಕ್ ನಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರು ಚಿನ್ನವನ್ನು ಸಾಗಿಸುತ್ತಿದ್ದರು. ಮಕ್ಕಳ ಬಟ್ಟೆಯ ಗುಂಡಿಗಳಿಗೆ ಇರುವ ಲೋಹದ ವಸ್ತುಗಳನ್ನು ಚಿನ್ನದಿಂದ ಅದೇ ರೀತಿಯಾಗಿ ಮಾಡಿಸಿ, ಅನುಮಾನ ಬಾರದ ರೀತಿಯಲ್ಲಿ ಕಳ್ಳ ಸಾಗಣೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.ಲೇಗೆಜ್ ಬ್ಯಾಗ್ ಹಾಗೂ ಮಕ್ಕಳ ಬಟ್ಟೆಗೆ ಸಂಬಂಧಿಸಿದ ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು 244.92 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಸಫಲರಾಗಿದ್ದು, ಮೌಲ್ಯ 12.49 ಲಕ್ಷ ಎಂದು ತಿಳಿದು ಬಂದಿದೆ.ತನಿಖೆ ಪ್ರಗತಿಯಲ್ಲಿದೆ.