ಕೆಎಂಎಫ್ ಗಾದಿ ಬಿಟ್ಟುಕೊಡಲು ನಾಗರಾಜ್ಗೆ ಗಡುವು ನೀಡಿದ ಡಿಕೆಶಿ
Team Udayavani, Feb 3, 2017, 3:45 AM IST
ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವಂತೆ ಹಾಲಿ ಅಧ್ಯಕ್ಷ ನಾಗರಾಜ್ಗೆ ಇಂಧನ ಸಚಿವ ಡಿ.ಕೆ. ಶಿವ ಕುಮಾರ್ ಶುಕ್ರವಾರ ಸಂಜೆವರೆಗೆ ಗಡುವು ನೀಡಿದ್ದಾರೆ.
ಗುರುವಾರ ತನ್ನನ್ನು ಭೇಟಿಯಾಗಿದ್ದ 11 ಕೆಎಂಎಫ್ ನಿರ್ದೇಶಕರ ಜತೆ ಸಮಾಲೋಚನೆ ನಡೆಸಿದ ಅನಂತರ ಪತ್ರಕರ್ತರ ಜತೆ ಮಾತನಾಡಿದ ಶಿವಕುಮಾರ್, ಶುಕ್ರ ವಾರ ಸಂಜೆಯೊಳಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ್ ರಾಜೀನಾಮೆ ಕೊಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ, ಕಾನೂನು ಪ್ರಕಾರ ನಮ್ಮ ಕೆಲಸವನ್ನು ನಾವು ಮಾಡು ತ್ತೇವೆಂದು ಎಚ್ಚರಿಕೆ ನೀಡಿದರು.
ನಾಗರಾಜ್ ಅಧ್ಯಕ್ಷರಾಗುವ ಸಂದರ್ಭದಲ್ಲೇ ನಿಗದಿ ಯಂತೆ ಶಾಸಕ ಎಂ.ಪಿ. ರವೀಂದ್ರಗೆ ಉಳಿದ ಅವಧಿಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೆಂದು ಒಪ್ಪಂದವಾಗಿತ್ತು. ಅದರಂತೆ ಸ್ಥಾನ ಬಿಟ್ಟುಕೊಡಬೇಕು ಎಂದು ತಿಳಿಸಿದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ಒಪ್ಪಂದದಂತೆ ಅವಧಿ ಮುಗಿದ ಅನಂತರ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವಂತೆ ಮುಖ್ಯಮಂತ್ರಿ ಹಾಗೂ ದಿ| ಎಚ್.ಎಸ್. ಮಹದೇವ ಪ್ರಸಾದ್ ಅವರೂ ಹೇಳಿದ್ದರು. ಆದರೆ, ನಾಗರಾಜ್ ಅಧಿಕಾರ ಬಿಟ್ಟುಕೊಡದೆ ಮುಂದುವರಿಯುತ್ತಿದ್ದಾರೆ. ಹೀಗಾಗಿ ಸಚಿವ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಲಾಗಿದೆ. ನಾಗರಾಜ್, ಡಿ.ಕೆ. ಶಿವಕುಮಾರ್ ಭಾಗದವರೇ ಆಗಿದ್ದಾರೆ. ಒಂದು ವೇಳೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದಿದ್ದರೆ, ಕೆಎಂಎಫ್ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಸಿಎಂ ಭೇಟಿ ಇಂದು: ಒಪ್ಪಂದದಂತೆ ಕೆಎಂಎಫ್ ಅಧ್ಯಕ್ಷರ ಹುದ್ದೆ ಬಿಟ್ಟುಕೊಡುವಂತೆ ನಾಗರಾಜ್ಗೆ ಸೂಚಿಸ ಬೇಕೆಂದು ಒತ್ತಾಯಿಸಲು, ಕಾಂಗ್ರೆಸ್ನ ಕೆಎಂಎಫ್ ನಿರ್ದೇಶಕರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಶಾಸಕ ಹಾಗೂ ಬಳ್ಳಾರಿ ಕೆಎಂಎಫ್ ನಿರ್ದೇಶಕ ಎಂ.ಪಿ. ರವೀಂದ್ರ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹೇರಲು ಮುಂದಾಗಿದ್ದಾರೆ.