ವರ್ಗಾವಣೆಗೆ ಕಾದ ಶಿಕ್ಷಕರಿಗೆ ನಿರಾಸೆ
Team Udayavani, Oct 21, 2017, 9:37 AM IST
ಬೆಂಗಳೂರು: ವರ್ಗಾವಣೆಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಶಿಕ್ಷಕರಿಗೆ ಮತ್ತೆ ಮತ್ತೆ ನಿರಾಸೆಯಾಗುತ್ತಿದೆ. ವರ್ಗಾವಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರೂ, ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿಲ್ಲ.
ದಸರಾ, ದೀಪಾವಳಿ ಕಳೆದರೂ, ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ದಕ್ಕಿಲ್ಲ. ಈ ಮಧ್ಯೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವರ್ಗಾವಣೆ ಯಾಗಿರುವುದರಿಂದ ಶಿಕ್ಷಕರ ವರ್ಗಾವಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಯಲ್ಲಿ ಶೇ.15ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇದ್ದರೆ ಅಂತಹ ಜಿಲ್ಲೆಗೆ ವರ್ಗಾವಣೆಯಿಲ್ಲ ಎಂಬ ನಿಯಮವನ್ನು ಸಡಿಲ ಮಾಡಬೇಕು. ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಪ್ರಮಾಣ ಹೆಚ್ಚಿಸಬೇಕು. ಸರ್ಕಾರಿ ದಂಪತಿ ಶಿಕ್ಷಕರಂತೆ, ಸರ್ಕಾರಿ-ಖಾಸಗಿ ದಂಪತಿ ಶಿಕ್ಷಕರಿಗೂ ಕನಿಷ್ಠ ಸೇವಾವಧಿ ವಿನಾಯ್ತಿ ನೀಡಬೇಕು ಎಂಬುದು ಸೇರಿ ಹತ್ತಾರು ಆಕ್ಷೇಪಣೆಗಳನ್ನು ಶಿಕ್ಷಕರು ಹಾಗೂ ಶಿಕ್ಷಕರ ಸಂಘದಿಂದ ಪ್ರತ್ಯೇಕವಾಗಿ ನೀಡಲಾಗಿದೆ.
ಆರ್ಥಿಕವಾಗಿ ಹೊರಯಾಗದಂತೆ ಕೆಲವು ಮಾರ್ಪಾಡು ಮಾಡಿ, ವರ್ಗಾವಣೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಹೆಚ್ಚಿದೆ. ಶೇ.15ರಷ್ಟು ಹುದ್ದೆ ಖಾಲಿ ಇದ್ದ ಜಿಲ್ಲೆಯಲ್ಲಿ ವರ್ಗಾವಣೆ ಇಲ್ಲ ಎಂಬ ಷರತ್ತಿಗೂ ತಿದ್ದುಪಡಿತರುವ ಸಾಧ್ಯತೆಯಿದೆ ಎಂದು ಇಲಾಖೆಯ ಉನ್ನತ ಮೂಲ ಖಚಿತಪಡಿಸಿದೆ. ಹಾಗೆಯೇ ಈ ಮಾಸಾಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ
ನಡೆಯುವ ಸಾಧ್ಯತೆ ಇದ್ದು, ಶೈಕ್ಷಣಿಕ ವರ್ಷದ ಅಂತ್ಯ ದಲ್ಲಿ ಆದೇಶ ಪ್ರತಿ ನೀಡುವ ಯೋಚನೆ ಇಲಾಖೆ ಅಧಿಕಾರಿಗಳ ಮುಂದಿದೆ.
ಸಚಿವರಿಂದ ಸ್ಪಂದನೆ
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಸಚಿವ ತನ್ವೀರ್ ಸೇs… ಮೇಲೆ ಒತ್ತಡ ಹೇರುತ್ತಿದ್ದೇವೆ. ಶೇ.15ರಷ್ಟು ಹುದ್ದೆ ಖಾಲಿ ಇರುವ ಜಿಲ್ಲೆಯಲ್ಲಿ ವರ್ಗಾವಣೆಯಿಲ್ಲ ಎಂಬ ನಿಯಮವನ್ನು ಸಡಿಲ ಮಾಡುವಂತೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ
ಗುರಿಕಾರ್ ಮಾಹಿತಿ ನೀಡಿದರು.