ಮೀಸಲಾತಿಯಲ್ಲಿ ವಿಶೇಷ ಚೇತನರಿಗೆ ತಾರತಮ್ಯ: ಪಿಐಎಲ್
Team Udayavani, Jun 16, 2018, 6:00 AM IST
ಬೆಂಗಳೂರು: ಕೆಪಿಎಸ್ಸಿ ನಡೆಸುತ್ತಿರುವ ಗ್ರೂಪ್ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ವಿಶೇಷ ಚೇತನರಿಗೆ ಸಂವಿಧಾನಬದ್ಧವಾಗಿ ದೊರಕಬೇಕಾಗಿರುವ ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸಿರುವ ಬಗ್ಗೆ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಆಯೋಗ ನಡೆಸುತ್ತಿರುವ 1,543 ಗ್ರೂಪ್ ಸಿ ಹಾಗೂ ಡಿ ದರ್ಜೆ ಹುದ್ದೆಗಳಲ್ಲಿ ವಿಶೇಷ ಚೇತನರಿಗೆ ಮೀಸಲಿಟ್ಟಿರುವ 124 ಹುದ್ದೆಗಳಲ್ಲಿ ಎಲ್ಲ ರೀತಿಯ ವಿಶೇಷ ಚೇತನರಿಗೆ (ಕಿವುಡ, ಮೂಗ, ಇತ್ಯಾದಿ) ಸಮಾನ ಅವಕಾಶ ಕಲ್ಪಿಸಿಲ್ಲ. ಈ ಪೈಕಿ ದೃಷ್ಟಿ ಚೇತನರಿಗೆ 80 ಹುದ್ದೆ ಮೀಸಲಿಟ್ಟು ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪಿಸಿ ಮೈಸೂರಿನ ಅಂಗವಿಕಲರ ಅಭ್ಯುದಯ ಸೇವಾ ಸಂಸ್ಥೆ’ ಅಧ್ಯಕ್ಷರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ| ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರು ಆಕ್ಷೇಪಿಸಿರುವಂತೆ ಮೀಸಲು ಹುದ್ದೆಗಳನ್ನು ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಆಯೋಗದಂತೆ ಮಾಹಿತಿ ಪಡೆದು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಸರಕಾರದ ಪರ ವಕೀಲರಿಗೆ ನಿರ್ದೇಶಿಸಿ ಜೂನ್ 27ಕ್ಕೆ ವಿಚಾರಣೆ ಮುಂದೂಡಿತು.