ಸದಸ್ಯರ ಅನರ್ಹತೆ: ಆಯೋಗದ ಆದೇಶ ಎತ್ತಿ ಹಿಡಿದ ಹೈಕೋರ್ಟ್
Team Udayavani, Apr 23, 2022, 6:30 AM IST
ಬೆಂಗಳೂರು: ಚುನಾವಣಾ ಖರ್ಚು-ವೆಚ್ಚದ ವಿವರಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅನೇಕಲ್ ಪುರಸಭೆಯ ಮೂವರು ಸದಸ್ಯರನ್ನು ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಸದಸ್ಯತ್ವದಿಂದ ಅನರ್ಹಗೊಳಿಸಿದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಅನೇಕಲ್ ಪುರಸಭೆಯ ಸದಸ್ಯರಾದ ಕೆ. ಶ್ರೀನಿವಾಸ್, ಎಸ್. ಲಲಿತಾ ಮತ್ತು ಸಿ.ಕೆ. ಹೇಮಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ. ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಭ್ರಷ್ಟಾಚಾರ ನಿಯಂತ್ರಣದ ನಿಟ್ಟಿನಲ್ಲಿ ಚುನಾವಣಾ ವೆಚ್ಚ ನಿಯಂತ್ರಣ ಮೊದಲ ಹೆಜ್ಜೆಯಾಗಿದೆ. ಹಾಗಾಗಿ, ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸುವುದಕ್ಕೆ ರೂಪಿಸಲಾಗಿರುವ ಕಾನೂನು-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾಯ್ದೆಯ ಉದ್ದೇಶವೇ ನಿಷ#ಲವಾಗುತ್ತದೆ. ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕಾಯ್ದುಕೊಳ್ಳಬೇಕು.ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಇದು ಅತ್ಯಗತ್ಯ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:ಈವರೆಗೆ ಪತ್ತೆಯಾದದ್ದು ಮೂರು ಕೆಎಫ್ಡಿ ಪ್ರಕರಣ; ಹಾಲಪ್ಪ ಎಚ್ಚರಿಕೆ
ಅರ್ಜಿದಾರರ ವಾದ ಒಪ್ಪಲಾಗದು:
ಜನರ ಕುಂದು ಕೊರತೆಗಳನ್ನು ಬಗೆಹರಿಸುವ ಒತ್ತಡದಲ್ಲಿದ್ದ ಕಾರಣ ಚುನಾವಣಾ ಖರ್ಚು-ವೆಚ್ಚ ಆಯೋಗಕ್ಕೆ ಸಲ್ಲಿಸಲು ಆಗಿಲ್ಲ ಎಂಬ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ. ಚುನಾವಣಾ ಖರ್ಚಿನ ವಿವರ ಸಲ್ಲಿಸಬೇಕೆಂಬ ಕಾನೂನಿನ ಹೆಚ್ಚಿನ ಅರಿವಿಲ್ಲವೆಂದರೆ, ಅದು ಸಾಕಷ್ಟು ದುರುಪಯೋಗಕ್ಕೆ ಕಾರಣವಾಗಿ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ.
ಮುಖ್ಯವಾಗಿ, ಅಂತಹ ನಿಯಮ ಪಾಲನೆ ಮಾಡದಿರುವುದಕ್ಕೆ ಯಾವುದೇ ವಿನಾಯ್ತಿ ನೀಡಲಾಗದು, ಹಗುರವಾಗಿ ಪರಿಗಣಿಸಲಾಗದು’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ಪುರಸಭೆಯ ಮೂವರು ಸದಸ್ಯರಾದ ಸದಸ್ಯರಾಗಿದ್ದ ಕೆ.ಶ್ರೀನಿವಾಸ್, ಎಸ್. ಲಲಿತಾ ಮತ್ತು ಸಿ.ಕೆ.ಹೇಮಲತಾ ಅವರು ಕರ್ನಾಟಕ ಪೌರನಿಗಮ ಕಾಯ್ದೆ- 1964ರ ಸೆಕ್ಷನ್ 16 ಸಿ ಪ್ರಕಾರ ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಂದ 30 ದಿನಗಳಲ್ಲಿ ಖರ್ಚು ವೆಚ್ಚವನ್ನು ಸಲ್ಲಿಸಿರಲಿಲ್ಲ. ಹಾಗಾಗಿ ರಾಜ್ಯ ಚುನಾವಣಾ ಆಯೋಗ ಅವರನ್ನು 2021ರ ನ.15ರಂದು ಅನರ್ಹಗೊಳಿಸಿತ್ತು.