ಪಿಎಸ್ಐ ಅಕ್ರಮ ಆರೋಪಿ ದಿವ್ಯಾ ಜತೆ ಡಿಕೆಶಿ ಫೋಟೊ; ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ
Team Udayavani, Apr 26, 2022, 2:05 PM IST
ಬೆಂಗಳೂರು: ಪಿಎಸ್ ಐ ನೇಮಕ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಇರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಸರಣಿ ಟ್ವೀಟ್ ಮೂಲಕ ಶಾಸಕ ಪ್ರಿಯಾಂಕ ಖರ್ಗೆ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಆರೋಪ ನಡೆಸಿದೆ.
ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ ನೋಡಿ! ಈ ಚಿತ್ರ ಏನು ಹೇಳುತ್ತದೆ? ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ! ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ ಎಂದು ಪ್ರಶ್ನಿಸಿದೆ.
ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!
ಇದನ್ನೂ ಓದಿ:ಚಿಕ್ಕಮಗಳೂರು: ಆನೆದಂತದಿಂದ ಚೆಸ್ ಆಟದ ಪಾನ್ ತಯಾರಿಸಿ ಮಾರಾಟಕ್ಕೆ ಯತ್ನ: ಆರೋಪಿ ಬಂಧನ
ಸಿಡಿ ವಿವಾದ, ಹಿಜಾಬ್ ಸಂಘರ್ಷ, 40% ಪರ್ಸೆಂಟ್ ಕಮಿಷನ್, ಹರ್ಷ ಕೊಲೆ, ಹುಬ್ಬಳ್ಳಿ ಗಲಭೆ, ಪಿಎಸ್ಐ ನೇಮಕ ಹಗರಣ. ಎಲ್ಲದಕ್ಕೂ ಸೂತ್ರಧಾರ ಒಬ್ಬರೇ. ಮಾನ್ಯ ಡಿಕೆ ಶಿವಕುಮಾರ್ ಅವರೇ.ನೀವೆಷ್ಟೇ ರಹಸ್ಯ ಕಾರ್ಯಚರಣೆ ನಡೆಸಿದರೂ ಸತ್ಯ ಒಂದಿಲ್ಲೊಂದು ದಿನ ಬಯಲಾಗಲೇಬೇಕಲ್ಲವೇ? ಎಂದು ಟೀಕಿಸಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಅವರು ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರ್ಯಕ್ಕೂ ಈಗ ದಾಖಲೆ ಲಭಿಸುತ್ತಿದೆ.ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡ! ಪಿಎಸ್ಐ ನೇಮಕ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ ಅವರೇ, ನೀವು ಈ ಮಹತ್ವದ ದಾಖಲೆಯನ್ನು ಮುಚ್ಚಿಟ್ಟಿದ್ದೇಕೆ? ನಿಮ್ಮ ಪಕ್ಷದ ನಾಯಕರ ಹುಳುಕು ಬಯಲಾಗುತ್ತದೆ ಎಂಬ ಭಯವೇ? ಇದೇ ಕಾರಣಕ್ಕಾಗಿ ನೀವು ಸಿಐಡಿ ವಿಚಾರಣೆ ತಪ್ಪಿಸಿಕೊಂಡಿದ್ದೇ? ಅಥವಾ ಹಗರಣದಲ್ಲಿ ನಿಮ್ಮದೂ ಪಾಲಿದೆಯೇ? ಎಂದು ಪ್ರಶ್ನಿಸಿದೆ.
ಪ್ರಿಯಾಂಕ ಖರ್ಗೆ ಅವರ ಜೊತೆ ನಾವಿದ್ದೇವೆ ಎಂದು ಕೆಪಿಸಿಸಿ ಭ್ರಷ್ಟಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇಕೆ ಎಂದು ಈಗ ಬಯಲಾಗುತ್ತಿದೆ. ಹಗರಣದ ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ ಎಲ್ಲವೂ ಸಿದ್ಧವಾಗಿದ್ದು ಕೆಪಿಸಿಸಿ ಕಚೇರಿಯಲ್ಲೇ ಎಂದು ಬಿಜೆಪಿ ಆರೋಪಿಸಿದೆ.