14ಕ್ಕೆ ಪದಗ್ರಹಣದ ಅನುಮತಿ ಕೋರಿದ ಡಿ.ಕೆ. ಶಿವಕುಮಾರ್
Team Udayavani, Jun 7, 2020, 7:20 AM IST
ಬೆಂಗಳೂರು: ಲಾಕ್ಡೌನ್ ನಡುವೆಯೇ ಜೂನ್ 14ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಅವಕಾಶ ಕಲ್ಪಿಸುವಂತೆ ಡಿ.ಕೆ.ಶಿವಕುಮಾರ್ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮವ ನ್ನು ಜೂನ್ 14ರಂದು ನಡೆಸಲು ಅನುಮತಿ ನೀಡಬೇಕೆಂದು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ.
ಜೂನ್ 8ರ ನಂತರ ಲಾಕ್ ಡೌನ್ ಸಡಿಲ ಮಾಡುವ ನಿರೀಕ್ಷೆಯಿದ್ದು, ನನ್ನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಹೀಗಾಗಿ 14ರಂದು ಕಾರ್ಯಕ್ರಮ ಮಾಡಲು ಸಿದತೆ ಮಾಡಿಕೊಳ್ಳುತ್ತಿದ್ದೇನೆ.ಅವರು ನನಗೆ ಈವರೆಗೆ ಅನುಮತಿ ನಿರಾಕರಿಸಿಲ್ಲ. ಒಂದುವೇಳೆ ನಿರಾಕರಿಸಿದರೆ ಆಮೇಲೆ ಅವರ ವರ್ಚುವಲ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಒಬ್ಬರೇ ಸ್ಪರ್ಧೆ: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಒಬ್ಬರು ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿ ಉಳಿದ ಮತಗಳನ್ನು ಯಾರಿಗೆ ಹಾಕಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಾಯಕರು ಸೂಚನೆ ನೀಡಲಿದ್ದು, ಅದನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದರು.