ಬೇಡಿಕೆ ಈಡೇರಿಕೆಗೆ ಒಪ್ಪಿಗೆ: ಡಿಸಿಎಂ ಡಾ| ಅಶ್ವತ್ಥನಾರಾಯಣ
ಶುಕ್ರವಾರದವರೆಗೂ ಮುಷ್ಕರ ಮುಂದುವರಿಕೆಗೆ ವೈದ್ಯರ ನಿರ್ಧಾರ
Team Udayavani, Sep 16, 2020, 5:57 AM IST
ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ ಭಡ್ತಿಗೆ ಸೇವಾವಧಿ ಕಡಿಮೆ ಮಾಡುವಂತೆ ಆಗ್ರಹಿಸಿ ಮುಷ್ಕರ ನಿರತ ಸರಕಾರಿ ವೈದ್ಯರಿಗೆ ಮುಷ್ಕರ ನಿಲ್ಲಿಸಿ ಸೇವೆಗೆ ವಾಪಸಾಗುವಂತೆ ರಾಜ್ಯ ಸರಕಾರ ಮನವಿ ಮಾಡಿದೆ.
ಜತೆಗೆ ವೈದ್ಯರ ಕೆಲವು ಬೇಡಿಕೆಗಳಿಗೆ ಒಪ್ಪಿರುವುದಾಗಿ ಸಚಿವರು ತಿಳಿಸಿದ್ದಾರೆ.
ಆದರೆ ವೈದ್ಯ ಸಂಘಟನೆಯು ಶುಕ್ರವಾರದವರೆಗೆ ಮುಷ್ಕರ ಮುಂದುವರಿಸಲು ನಿರ್ಧರಿಸಿದೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹಾಗೂ ಉಪ ಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗಿತ್ತು.
ವೈದ್ಯರ ವೇತನ ಪರಿಷ್ಕರಣೆಗೆ ಸರಕಾರ ಸಹಮತ ವ್ಯಕ್ತಪಡಿಸಿ, ಮುಷ್ಕರ ವಾಪಸ್ ಪಡೆಯಲು ಕೋರಿತ್ತು. ಆದರೆ, ವೈದ್ಯರ ಸಂಘದ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮಷ್ಕರ ಶುಕ್ರವಾರದವರೆಗೆ ಮುಂದುವರಿಯಲಿದೆ.
ವೈದ್ಯರು ಏಳು ತಿಂಗಳ ಕಾಲ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಸರಕಾರ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಿದೆ. ವೈದ್ಯರು ಪ್ರತಿಭಟನೆ ಬಿಟ್ಟು ಜನರ ಸೇವೆಗೆ ವಾಪಸಾಗಬೇಕು ಎಂದು ಡಿಸಿಎಂ ಡಾ| ಅಶ್ವತ್ಥನಾರಾಯಣ ಹೇಳಿದ್ದಾರೆ.
ಸಭೆ ಫಲಪ್ರದ: ಡಾ| ಸುಧಾಕರ್
ಈ ಮಧ್ಯೆ ವೇತನ ಪರಿಷ್ಕರಣೆ ಸಂಬಂಧ ವೈದ್ಯರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ವೈದ್ಯರಿಗೆ ನೈತಿಕ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಕಳೆದ ಆರು ತಿಂಗಳಲ್ಲಿ ಆರೋಗ್ಯ ಇಲಾಖೆಯ ಎಲ್ಲ ಪ್ರಸ್ತಾವಗಳಿಗೂ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ವೈದ್ಯರ ಬೇಡಿಕೆಗಳು ಈಡೇರಲಿವೆ ಎಂದರು.
ಶುಕ್ರವಾರ ನಿರ್ಧಾರ
ವೇತನ ಹೆಚ್ಚಳ ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಈ ಸಭೆಯ ತೀರ್ಮಾನದ ಕುರಿತು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಶುಕ್ರವಾರ ಮತ್ತೆ ಸಚಿವರ ಜತೆ ಸಭೆ ನಡೆಸಲಿದ್ದೇವೆ. ಶುಕ್ರವಾರದವರೆಗೂ ನಮ್ಮ ಅಸಹಕಾರ ಪ್ರತಿಭಟನೆ ಮುಂದುವರಿಯಲಿದೆ.
– ಡಾ| ಗೋಳೂರು ಶ್ರೀನಿವಾಸ್, ರಾಜ್ಯ ಸರಕಾರಿ ವೈದ್ಯರ ಸಂಘದ ಅಧ್ಯಕ್ಷ.