ಖಾಸಗಿ ಆಸ್ಪತ್ರೆ ಮಸೂದೆಗೆ ಬ್ರೇಕ್; BJP ಒತ್ತಾಯಕ್ಕೆ ಮಣಿದ ಸರ್ಕಾರ
Team Udayavani, Jun 20, 2017, 6:08 PM IST
ಬೆಂಗಳೂರು: ಖಾಸಗಿ ಆಸ್ಪತ್ತೆಗಳಿಗೆ ಶುಲ್ಕ ನಿಗದಿಪಡಿಸಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಜಾರಿಗೆ ತರಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಬಿಜೆಪಿ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ವಿಧೇಯಕವನ್ನು ಜಂಟಿ ಸದನ ಸಮಿತಿ ಪರಾಮರ್ಶೆಗೆ ಕಳುಹಿಸಿದೆ.
ಈ ವಿಧೇಯಕದಲ್ಲಿ ಖಾಸಗಿ ಆಸ್ಪತ್ರೆಯ ಶುಲ್ಕ ನಿಗದಿ ಅಧಿಕಾರವನ್ನು ಕಿತ್ತುಕೊಂಡಿದೆ. ಅಲ್ಲದೇ ವೈದ್ಯರು ಚಿಕಿತ್ಸೆ ನೀಡಿದಾಗ ಫಲಕಾರಿಯಾಗದೆ ಇದ್ದಲ್ಲಿ ಅಂಥ ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಇತ್ತೀಚೆಗೆ ಪ್ರತಿಭಟನೆ ನಡೆಸಿ ಈ ವಿಧೇಯಕ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು.
ಆರೋಗ್ಯ ಸಚಿವ ರಮೇಶ್ ಕುಮಾರ್ ವಿರುದ್ಧ ಖಾಸಗಿ ವೈದ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಮಸೂದೆ ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಮಸೂದೆ ಅಂಗೀಕಾರವಾಗುವುದು ಶತಸಿದ್ಧ ಎಂದು ಹೇಳಿದ್ದರು.
ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಜಾರಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಳಿಕ ಸ್ಪೀಕರ್ ಕೆಬಿ ಕೋಳಿವಾಡ ಅವರು ವಿಧೇಯಕವನ್ನು ಜಂಟಿ ಸದನ ಸಮಿತಿ ಪರಾಮರ್ಶೆಗೆ ಕಳಹಿಸುವ ನಿರ್ಧಾರ ಕೈಗೊಂಡರು. ಇದರಿಂದಾಗಿ ಜನಪರ ವಿಧೇಯಕ ಈ ಬಾರಿಯೂ ಪಾಸ್ ಆಗದೆ ಉಳಿಯುವಂತಾಗಿದೆ.