ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದಸರಾ ಗಜಪಡೆ
Team Udayavani, Aug 24, 2019, 3:04 AM IST
ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಗರಕ್ಕೆ ಆಗಮಿಸಿರುವ ಆರು ಆನೆಗಳು ಅಶೋಕಪುರಂನಲ್ಲಿರುವ ಅರಣ್ಯಭವನದ ಆವರಣದಲ್ಲಿ ಬೀಡು ಬಿಟ್ಟಿವೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಮೊದಲ ಹಂತದಲ್ಲಿ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಆನೆಗಳನ್ನು ಕರೆತರಲಾಗಿದೆ.
ಆ.26ರಂದು ಮೊದಲ ತಂಡದ ಈ ಆರು ಆನೆಗಳನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ. ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲಾ 14 ಆನೆಗಳಿಗೂ ಜಿಲ್ಲಾಡಳಿತ ವಿಮೆ ಮಾಡಿಸಿದೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮೂಲಕ 40 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದು, 44,840 ರೂ. ಪ್ರೀಮಿಯಂ ಪಾವತಿಸಿದೆ. ಈ ಆನೆಗಳ 14 ಮಾವುತರು ಮತ್ತು 14 ಕವಾಡಿಗಳಿಗೆ ತಲಾ 1 ಲಕ್ಷ ರೂ.ಗಳಂತೆ 28 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿದ್ದು, ತಲಾ 720 ರೂ. ಪ್ರೀಮಿಯಂ ಪಾವತಿಸಿದೆ.
ದಸರಾ ಆನೆಗಳಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾದಲ್ಲಿ ಪರಿಹಾರಕ್ಕಾಗಿ 30 ಲಕ್ಷಕ್ಕೆ ವಿಮೆ ಮಾಡಿಸಿ, 3,540 ರೂ. ಪ್ರೀಮಿಯಂ ಪಾವತಿಸಿದೆ. ಒಟ್ಟಾರೆ 98 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದು, 49,100 ರೂ. ಪ್ರೀಮಿಯಂ ಪಾವತಿಸಿದೆ. ಈ ವಿಮೆ ಅಕ್ಟೋಬರ್ 15ರವರೆಗೆ ಚಾಲ್ತಿಯಲ್ಲಿರಲಿದೆ.