ಬೆಂಗಳೂರಿನಲ್ಲಿ ತುಳುಭವನ ನಿರ್ಮಾಣಕ್ಕೆ ಯತ್ನ
ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್ ಹೇಳಿಕೆ
Team Udayavani, May 16, 2022, 1:54 AM IST
ಬೆಂಗಳೂರು: ಕರಾವಳಿ ಜಿಲ್ಲೆಗಳಿಂದ ಅನೇಕ ಮಂದಿ ಕೇಂದ್ರ ಹಾಗೂ ರಾಜ್ಯ ಸಚಿವರಾಗಿ ರಾಜಕೀಯ ಪ್ರವೇಶಿಸಿದ್ದರೂ, ಬೆಂಗಳೂರಿನಲ್ಲಿ ತುಳು ಭವನ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ತುಳುವೆರೆಂಕುಲು ಸಂಘದ ವತಿಯಿಂದ ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 30ನೇ ವರ್ಷ ಬೆಂಗಳೂರು ತುಳು ಪರ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನದಲ್ಲಿ ಭವನ ನಿರ್ಮಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಅಲ್ಲಿಯೇ ಮುಂದಿನ ದಿನದಲ್ಲಿ ತುಳು ಭಾಷೆಯ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಂದಿನ ಪೀಳಿಗೆಗೆ-ಯಕ್ಷಪ್ರಶ್ನೆ
ತುಳು ಕೇವಲ ಕಾರ್ಯಕ್ರಮಗಳಿಗೆ ಸೀಮತವಾಗದೆ ತುಳುವಿಗರ ಜೀವ ಭಾಷೆಯಾಗಿ ಪರಿವರ್ತನೆಯಾದರೆ ಮಾತ್ರ ಉಳಿಯಲು ಸಾಧ್ಯ. ಇಂದು ಕೆಲ ಪೋಷಕರು ತುಳು ಭಾಷೆ ಉಳಿಗೆ ಹೋರಾಟ ಮಾಡುತ್ತಾರೆ. ಆದರೆ ಮನೆಯಲ್ಲಿ ಮಕ್ಕಳಿಂದ ತುಳು ಭಾಷೆಯಿಂದ ದೂರವಿರುಸುತ್ತಿದ್ದಾರೆ. ಇದರಿಂದ ಅತ್ಯಂತ ಶ್ರೀಮಂತವಾದ ತುಳು ಸಂಸ್ಕೃತಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರು.
ಸಂಘಟಕ ಸರ್ವೋತ್ತಮ ಶೆಟ್ಟಿ, ಚಿಂತಕ ಸಿ. ಲಕ್ಷಣ ಪೂಜಾರಿ, ತುಳುವೆರೆಂಕುಲು ಮಾಜಿ ಅಧ್ಯಕ್ಷ ಮಾಧವ ಕುಲಾಲ್, ಡಾ| ಕೆ. ಎನ್. ಅಡಿಗ, ಕುಲಾಲ ಸಮಾಜದ ಅಧ್ಯಕ್ಷ ಪುರುಷೋತ್ತಮ, ಯಕ್ಷಗಾನ ಶಿಕ್ಷಕಿ ಗೌರಿ ಸಾಸ್ತಾನ ಅವರನ್ನು ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.
ತುಳುವೆರೆಂಕುಲ ಸಂಘದ ಗೌರವ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್, ವಿಧಾನಸಭೆ ವಿಪಕ್ಷದ ಉಪನಾಯಕ ಯು.ಟಿ. ಖಾದರ್, ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಸದಸ್ಯೆ ಕಾಂತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.