ಆನೆ ಸಾವಿಗೆ ಕೊಲ್ಲೂರು ಬಂದ್
Team Udayavani, Aug 15, 2019, 3:03 AM IST
ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಮಂಗಳವಾರ ರಾತ್ರಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಬುಧವಾರ ದಂದು ಶೋಕಾಚರಣೆ ಪ್ರಯುಕ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಆಚರಿಸಲಾಯಿತು. ಕಳೆದ 3 ದಿವಸಗಳಿಂದ ಜ್ವರಭಾದೆಯಿಂದ ಬಳಲುತ್ತಿದ್ದ 62 ವರ್ಷ ಪ್ರಾಯದ ಇಂದಿರಾಗೆ ತುರ್ತು ಚಿಕಿತ್ಸೆ ನೀಡಲು ಸಕ್ರೆಬೈಲಿನಿಂದ ತಜ್ಞ ವೈದ್ಯರು ಆಗಮಿಸಿ, ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗಲಿಲ್ಲ.
ಸಕ್ರೆಬೈಲಿನ ವೈದ್ಯರ ತಂಡ ಸುಮಾರು 6 ತಾಸುಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಿ, ದಹನ ಕಾರ್ಯಕ್ಕೆ ಇಂದಿರಾಳ ದೇಹವನ್ನು ಬಿಟ್ಟು ಕೊಟ್ಟರು. ದೇಗುಲದಲ್ಲಿ ನಡೆದ ಗಜಪೂಜೆಯ ನಂತರ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ, ವಿಧಾನ ನಡೆಸಿ, ದಹನ ಕಾರ್ಯಕ್ಕೆ ಅಣಿಮಾಡಿದರು.
15 ಅಡಿ ಗಾತ್ರದ ಹೊಂಡ ನಿರ್ಮಿಸಿ, ಕಟ್ಟಿಗೆ ಇಟ್ಟು ಅದರ ಮೇಲೆ ಇಂದಿರಾಳನ್ನು ಮಲಗಿಸಿ, ತುಪ್ಪ, ಗಂಧವನ್ನು ಇಟ್ಟು ದಹನ ಕಾರ್ಯ ನಡೆಸಲಾಯಿತು. ಕಲ್ಯಾಣಿ ಗುಡ್ಡೆಯಲ್ಲಿ ನಡೆದ ದಹನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಇಂದಿರಾಗೆ ಮಾಲಾರ್ಪಣೆ ಮಾಡಿ, ಅಶ್ರುತರ್ಪಣ ಸಲ್ಲಿಸಿದರು.