ದೈನಂದಿನ ಸಾರಿಗೆ ಆದಾಯ ತಂತ್ರಾಂಶದಲ್ಲಿ ನಮೂದು: ಸೂಚನೆ
Team Udayavani, Jan 6, 2021, 8:42 PM IST
ಬೆಂಗಳೂರು: ಸಾರಿಗೆ ಸಂಸ್ಥೆಯ ನಿತ್ಯದ ಆದಾಯವನ್ನು “ಕೆಎಸ್ಆರ್ಟಿಸಿ ಎಂಐಎಸ್’ (ನಿರ್ವಹಣೆ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನಮೂದಿಸುವಂತೆ ರಾಜ್ಯ ರಸ್ತೆ ಸಾರಿಗೆ ನಿಮಗದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಸುತ್ತೋಲೆ ಹೊರಡಿಸಿದ್ದು, ಜ. 11ರಿಂದ ಜಾರಿಗೆ ಬರಲಿದೆ.
ನಿಗಮ ವ್ಯಾಪ್ತಿಯ ಘಟಕ ಮತ್ತು ವಿಭಾಗಗಳ ದೈನಂದಿನ ಸಾರಿಗೆಗಳ ಕಾರ್ಯಾಚರಣೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಕೇಂದ್ರ ಕಚೇರಿ, ವಿಭಾಗ ಹಾಗೂ ಘಟಕಗಳಲ್ಲಿ ವೀಕ್ಷಿಸಲು ಅನುವಾಗುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ಘಟಕಕ್ಕೆ ಒದಗಿಸಲಾದ ಯೂಸರ್ ಐಡಿ ಮತ್ತು ಪಾಸ್ವರ್ಡ್ಗಳನ್ನು ಬಳಸಿ ಪ್ರತಿ ದಿನ ಆದಾಯಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ನಮೂದು ಮಾಡಬೇಕಾಗಿದೆ.
ಸಾಂದರ್ಭಿಕ ಒಪ್ಪಂದದ ಆದಾಯ, ಸಾಂದರ್ಭಿಕ ಒಪ್ಪಂದಗಳ ವಾಹನಗಳ ಸಂಖ್ಯೆ, ಹೆಚ್ಚುವರಿ ಆಗಿ ಕಾರ್ಯಾಚರಣೆ ಮಾಡಿರುವ ವಾಹನಗಳ ಸಂಖ್ಯೆ, ವಿದ್ಯಾರ್ಥಿ ರಿಯಾಯಿತಿ ಪಾಸಿನ ಆದಾಯ, ಒಟ್ಟು ಪ್ರಯಾಣಿಕರ ಸಂಖ್ಯೆ ಮುಂತಾದ ಮಾಹಿತಿಗಳನ್ನು ದಾಖಲಿಸುವುದು ಅಂಕಿಅಂಶ ಅಧಿಕಾರಿಗಳ ಕರ್ತವ್ಯವಾಗಿದೆ ಎಂದಿದ್ದಾರೆ.