ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರದಿಂದ ಮಲತಾಯಿ ಧೋರಣೆ: ಈಶ್ವರ್ ಖಂಡ್ರೆ
Team Udayavani, Dec 21, 2021, 10:46 AM IST
ಸುವರ್ಣಸೌಧ (ಬೆಳಗಾವಿ): ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು ಎಂದು ಬೆಳಗಾವಿಯಲ್ಲಿ ಅಧಿವೇಶನ ಮಾಡಿರುವುದು. ಆದರೆ ಕಲ್ಯಾಣ ಕರ್ನಾಟಕ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮಾಡಲಾಗುತ್ತಿದ್ದು, ಘನಘೋರ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಹತ್ತು ದಿನಗಳ ಒಳಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡುತ್ತೇವೆ ಎಂದು ಸಿಎಂ ಮಾತು ಕೊಟ್ಟಿದ್ದರು. ಆದರೆ ಮೂರು ತಿಂಗಳು ಆದರೂ ಮಂಡಳಿ ರಚನೆ ಆಗಿಲ್ಲ, ಸಭೆಯೂ ನಡೆದಿಲ್ಲ. ಬಜೆಟ್ ನಲ್ಲಿ 1500 ಕೋಟಿ ಇಡಲಾಗಿದೆ. 125 ಕೋಟಿ ಅಷ್ಟೇ ಖರ್ಚಾಗಿದೆ. ಖಾಲಿ ಹುದ್ದೆ ಭರ್ತಿಯಾಗಿಲ್ಲ, ವಿವಿಯಲ್ಲಿ ಶೇ.80 ಹುದ್ದೆ ಖಾಲಿಯಿದೆ. ಕಲ್ಯಾಣ ಕರ್ನಾಟಕವನ್ನುಎರಡನೇ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ರಾಜ್ಯಕ್ಕೆ ಕಪ್ಪುಚುಕ್ಕೆ, ನಮ್ಮ ವಿರೋಧವಿದೆ: ಡಿಕೆ ಶಿವಕುಮಾರ್
ನಾವು ಬೇರೆಯೇ ಆಗಬೇಕು ಎಂಬ ರೀತಿಯಲ್ಲಿ ಪುಷ್ಟಿ ಕೊಡುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತೇವೆ. ಅನಾವಶ್ಯಕ ಕಾಯ್ದೆ ತಂದು ವೈಫಲ್ಯ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಯತ್ನ ಸರ್ಕಾರ ನಡೆಸುತ್ತಿದೆ ಎಂದು ಖಂಡ್ರೆ ಆರೋಪಿಸಿದರು.