ದ್ವೇಷ, ಕೋಪ ಬಿಟ್ಟು ಮತ್ತೆ ಒಂದಾದ ದೇವೇಗೌಡ, ಸಿದ್ದು; ಜಂಟಿ ಘೋಷಣೆ!
Team Udayavani, Oct 20, 2018, 6:46 PM IST
ಬೆಂಗಳೂರು: ಈ ಹಿಂದೆ ಹಲವು ಬಾರಿ ಹಾವು-ಮುಂಗುಸಿಯಂತೆ ಇದ್ದಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೇ ದ್ವೇಷ ಮರೆತು, ಜಾತ್ಯತೀತ ಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಿಶ್ಚಿತ ಎಂದು ಘೋಷಿಸಿದ್ದಾರೆ.
ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಅಭ್ಯರ್ಥಿಗಳ ಪರ ಜೆಡಿಎಸ್, ಕಾಂಗ್ರೆಸ್ ಮುಖಂಡರು ಜಂಟಿ ಪ್ರಚಾರ ನಡೆಸುವುದಾಗಿ ತಿಳಿಸಿದರು. ಈ ಹಿಂದೆ ನಾವು ಪರಸ್ಪರ ಆರೋಪಿಸಿಕೊಂಡಿದ್ದೇವೆ. ಈಗ ಹಳೆಯದ್ದೆಲ್ಲ ಮರೆತು ದೇಶದ ಭವಿಷ್ಯದ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಜಾತ್ಯತೀತ ಮತಗಳು ವಿಭಜನೆಯಾಗಲು ಅವಕಾಶ ಕೊಡಬಾರದು. ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿನ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿಯೇ ಅಡಿಪಾಯ ಎಂದು ತಿಳಿಸಿದರು.