ಜಂಬೂಸವಾರಿ ಆನೆಗಳಿಗೆ ದುಬಾರೆಯಿಂದ ಬೀಳ್ಕೊಡುಗೆ
Team Udayavani, Aug 22, 2019, 3:00 AM IST
ಮಡಿಕೇರಿ/ಮೈಸೂರು: ಮೈಸೂರು ದಸರಾ ಗಜಪಯಣ ದಲ್ಲಿ ಪಾಲ್ಗೊಳ್ಳಲು ದುಬಾರೆ ಶಿಬಿರದ 3 ಆನೆಗಳನ್ನು ಹುಣಸೂರು ವೀರನಹೊಸಳ್ಳಿಯ ಶಿಬಿರಕ್ಕೆ ಬುಧವಾರ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಆನೆಗಳಾದ ಧನಂಜಯ (47), ಈಶ್ವರ (51), ವಿಜಯ (56) ಆನೆಗಳಿಗೆ ಪೂಜೆ ಸಲ್ಲಿಸಿ, ಅರಣ್ಯ ಇಲಾಖೆಯ ಅಧಿಕಾರಿ ಗಳು, ಸಿಬ್ಬಂದಿ ಬೀಳ್ಕೊಟ್ಟರು. ಪೂಜೆ ನಂತರ ಆನೆಗಳಿಗೆ ಬೆಲ್ಲ, ಕಬ್ಬು ತಿನಿಸಿ ಬೀಳ್ಕೊಡಲಾಯಿತು. ಆನೆ ಜತೆಗೆ ಮಾವುತ, ಕವಾಡಿಗರ ಕುಟುಂಬ ಸದಸ್ಯರು ತೆರಳಿದ್ದಾರೆ.
ಇಂದು ಗಜಪಯಣ: ಈ ಮಧ್ಯೆ, ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವ ಗಜಪಯಣ ಕಾರ್ಯಕ್ರಮ ಗುರುವಾರ ಬೆಳಗ್ಗೆ 11 ಗಂಟೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಅಂಚಿನಲ್ಲಿ ಬರುವ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ನಡೆಯಲಿದೆ.