ಕೇಂದ್ರ ನೆರವು ನೀಡದಿದ್ದರೂ ರೈತರ ಸಾಲಮನ್ನಾ ಖಚಿತ: ಕುಮಾರಸ್ವಾಮಿ
Team Udayavani, Dec 4, 2018, 6:23 PM IST
ಬೆಂಗಳೂರು: ಡಿಸೆಂಬರ್ 5ರೊಳಗೆ ಎಲ್ಲಾ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಕೇಂದ್ರ ಸರ್ಕಾರ ಹಣ ನೀಡದೆ ಹೋದರೂ ಕೂಡಾ ರಾಜ್ಯ ಸರ್ಕಾರ ರೈತರ ಸಾಲಮನ್ನಾಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಸದ್ಯ ಪ್ರಾಯೋಗಿಕವಾಗಿ ಎಲ್ಲಾ ತಾಲೂಕುಗಳಲ್ಲಿ ಸಾಲಮನ್ನಾ ಮಾಡಲಾಗಿದೆ ಎಂದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲದ ಶೇ.50ರಷ್ಟು ಹೊರೆಯನ್ನು ಕೇಂದ್ರ ಸರ್ಕಾರ ಹೊರಬೇಕು ಎಂದು ಮನವಿ ಮಾಡಿದ್ದೇವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಆದರೂ ಕೇಂದ್ರ ಸರ್ಕಾರ ನೆರವು ನೀಡಲಿಲ್ಲ ಎಂದು ರೈತರ ಸಾಲಮನ್ನಾ ವಿಚಾರ ಕೈಬಿಡಲ್ಲ ಎಂದು ಹೇಳಿದರು. ಮೊದಲ ಕಂತಿನ ಸಾಲಮನ್ನಾದ ಹಣ ಬಿಡುಗಡೆಗೆ ಸೂಚನೆ ನೀಡಿದ್ದೇನೆ. ಪ್ರಾಯೋಗಿಕವಾಗಿ ಸೇಡಂ ಮತ್ತು ದೊಡ್ಡಬಳ್ಳಾಪುರದಲ್ಲಿ ಸಾಲಮನ್ನಾ ಮಾಡಲಿದ್ದು, ಬಳಿಕ ಡಿ.8ರಂದು ರೈತರಿಗೆ ಋಣಮುಕ್ತ ಪತ್ರ ನೀಡುವುದಾಗಿ ಹೇಳಿದರು.
ಜನವರಿಯಲ್ಲಿ ರೈತ ಸಮಾವೇಶ ನಡೆಸಲಾಗುವುದು. ಅಂದು ರಾಜ್ಯಾದ್ಯಂತ ಋಣಮುಕ್ತ ಪತ್ರ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ಪಡೆದ ಸಾಲಮನ್ನಾ ಮೊದಲ ಹಂತದಲ್ಲಿ ಆಗಲಿದೆ. ಆರಂಭಿಕವಾಗಿ 50 ಸಾವಿರ ರೂ. ಮನ್ನಾ ಆಗಲಿದೆ. ಸಹಕಾರ ವಲಯದ 9,500 ಕೋಟಿ ರೂ. ಸಾಲಮನ್ನಾ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 44ಸಾವಿರ ಕೋಟಿ ರೂ.ಸಾಲಮನ್ನಾ ಇನ್ನಷ್ಟೇ ಆಗಬೇಕಾಗಿದೆ ಎಂದರು.