ಭದ್ರತಾ ಸಿಬ್ಬಂದಿ ಮೇಲೆ ವಿದೇಶಿಗ ಹಲ್ಲೆ
Team Udayavani, Sep 23, 2019, 3:00 AM IST
ಹೊಸಪೇಟೆ: ಹಂಪಿ ವೀಕ್ಷಣೆಗೆ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ, ಇಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಗನ್ಮ್ಯಾನ್ ಧರ್ಮರಾಜ್ ಆಸ್ಪತ್ರೆಗೆ ದಾಖಲಾಗಿದ್ದು, ಪ್ರವಾಸಿ ನಾಪತ್ತೆಯಾಗಿದ್ದಾನೆ.
ಹಂಪಿಯ ಕಮಲ ಮಹಲ್ ವೀಕ್ಷಣೆಗೆ ಬಂದ ವಿದೇಶಿ ಪ್ರವಾಸಿಗನನ್ನು ಭದ್ರತಾ ಸಿಬ್ಬಂದಿ ತಡೆದು, ಮಹಲ್ನ ಮೇಲ್ಭಾಗಕ್ಕೆ ತೆರಳದಂತೆ ಸೂಚಿಸಿದ್ದಾನೆ. ಇದರಿಂದ ಕೆರಳಿದ ಪ್ರವಾಸಿಗ ಏಕಾಏಕಿ ಸಿಬ್ಬಂದಿ ಕೈಯಲ್ಲಿದ್ದ ಗನ್ ಕಿತ್ತುಕೊಂಡು ಹೆದರಿಸಿ ದ್ದಾನೆ. ಕೊನೆಗೆ ಬಂದೂಕಿನ ಹಿಂಭಾಗದಿಂದ ಸಿಬ್ಬಂದಿ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಧರ್ಮರಾಜ್ಗೆ ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಂಪಿಯಲ್ಲಿ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಭಾರತೀಯ ಪುರಾತತ್ವ ಇಲಾಖೆ ಎಸ್ಐಎಸ್ ಸೆಕ್ಯೂರಿಟಿಯಿಂದ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನೇಮಕ ಮಾಡಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಸ್ಮಾರಕಗಳ ಬಳಿ ಶಸ್ತ್ರಸಜ್ಜಿತ ಸಿಬ್ಬಂದಿ ಕಾವಲು ಕಾಯುತ್ತಿರುತ್ತಾರೆ. ಕರ್ತವ್ಯನಿರ್ವಹಿಸುತ್ತಿದ್ದ ಸಮಯದಲ್ಲೇ ಶಸ್ತ್ರಸಜ್ಜಿತ ಸಿಬ್ಬಂದಿ ಮೇಲೆ ಪ್ರವಾಸಿಗ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಹಂಪಿ ಪ್ರವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.