ರಾಜ್ಯ ಸಭೆಗೆ ದೇವೇಗೌಡರು ಸ್ಪರ್ಧಿಸಲಿ: ಹೊರಟ್ಟಿ ಅಭಿಮತ
Team Udayavani, Jun 4, 2020, 11:25 PM IST
ಬೆಂಗಳೂರು: ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಮಾಜೀ ಪ್ರಧಾನಿ ದೇವೇಗೌಡರು ಅಭ್ಯರ್ಥಿಯಾಗಲಿ ಎಂದು ಪಕ್ಷದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮಗೆ ಒಂದು ಸ್ಥಾನಕ್ಕೆ ಮತಗಳು ಕಡಿಮೆ ಬೀಳುತ್ತವೆ, ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಯಾವುದೇ ಗೊಂದಲ ಇಲ್ಲ. ಆದರೆ ಆರೋಗ್ಯ ಸರಿ ಇಲ್ಲವಾಗಿರುವ ಕಾರಣ ತನ್ನ ಅಭ್ಯರ್ಥಿತನ ಬೇಡ ಎಂದು ದೇವೆಗೌಡರು ಹೇಳುತ್ತಿರುವುದು ನಿಜ ಎಂದು ಹೊರಟ್ಟಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ದೇವೇಗೌಡರು ಸ್ಪರ್ಧಿಸದಿದ್ದರೆ ನಮ್ಮಲ್ಲಿ ಬೇರೆ ಯಾರಾದರೂ ಸ್ಪರ್ಧಿಸಬೇಕಾಗುತ್ತದೆ. ಮತ್ತು ಆ ಸಂದರ್ಭದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲವನ್ನು ಪಡೆದುಕೊಳ್ಳುವ ಕುರಿತಾಗಿ ನಮ್ಮಲ್ಲಿ ಕೆಲವರು ಚರ್ಚೆ ನಡೆಸಿರುವುದು ನಿಜ ಎಂದು ಹೊರಟ್ಟಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮತ್ತು ಈ ಎಲ್ಲಾ ವಿಚಾರಗಳ ಕುರಿತಾಗಿ ನಾಳಿನ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಶಾಲೆಗಳನ್ನು ತೆರೆಯುವ ವಿಚಾರ
ಈ ಸಂದರ್ಭದಲ್ಲಿ ಸರ್ಕಾರ ಶಾಲೆಗಳನ್ನು ಪ್ರಾರಂಭಿಸುವುದು ಶುದ್ದ ತಪ್ಪು. ಕೋವಿಡ್ ನಿಯಂತ್ರಣಕ್ಕೆ ಬರುವ ಮೊದಲೇ ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸಿದರೆ ಅನಾಹುತ ಆಗುವುದು ನಿಶ್ಚಿತ ಎಂದು ಮಾಜೀ ಶಿಕ್ಷಣ ಸಚಿವರೂ ಆಗಿರುವ ಹೊರಟ್ಟಿ ಅವರು ಅಭಿಪ್ರಾಯಪಟ್ಟರು.
ಸಣ್ಣ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಕ್ತಾ ಇರಲು ಆಗುವುದಿಲ್ಲ. ದಸರಾ ರಜೆ, ಹಬ್ಬದ ರಜೆ ಕಟ್ ಮಾಡಬಹುದು, ಶನಿವಾರ ಪೂರ್ತಿ ದಿನ ತರಗತಿ ಮಾಡಬಹುದು. ಖಾಸಗಿ ಶಾಲೆಗಳ ಲಾಬಿಗೆ ಸುರೇಶ್ ಕುಮಾರ್ ಮಣಿದಿದ್ದಾರೆ ಅಂತಾ ನಾನು ಹೇಳುವುದಿಲ್ಲ ಬದಲಾಗಿ
ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಅಧಿಕಾರಿಗಳು ಹೇಳಿರಬಹುದು, ಆದರೆ ಮಂತ್ರಿಗಳಾದವರು ಅಧಿಕಾರಿಗಳ ಮಾತನ್ನು ಪೂರ್ತಿ ಕೇಳಬಾರದು ಎಷ್ಟು ಬೇಕೋ ಅಷ್ಟು ಕೇಳಿ ನಮ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.