“3-4 ದಿನದಲ್ಲಿ ವಿಷ್ಣು ಸ್ಮಾರಕಕ್ಕೆ ಅಡಿಪಾಯ’
Team Udayavani, Dec 19, 2019, 3:05 AM IST
ಬೆಂಗಳೂರು: ಮೈಸೂರು ಬಳಿ ನಿಗಧಿಯಾಗಿರುವ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಅಡಿಪಾಯಕ್ಕೆ ಮುಂದಿನ ನಾಲ್ಕೈದು ದಿನಗಳಲ್ಲೇ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಡಾಲೋರ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಬುಧವಾರ ಭೇಟಿ ನೀಡಿದ್ದ ಭಾರತಿ ವಿಷ್ಣುವರ್ಧನ್ ಅವರಿಗೆ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ.
ಡಿಸೆಂಬರ್ 30 ರಂದು ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ನಡೆಯಲಿದೆ. ಈಗಾಗಲೇ ಮೈಸೂರಲ್ಲಿ ನಿಗಧಿಯಾಗಿರುವ ಸ್ಮಾರಕ ಸ್ಥಳದಲ್ಲಿ ತಾತ್ಕಾಲಿಕ ಕಾಂಪೌಂಡ್ ಆಗಿದ್ದು, ಬೋರ್ವೆಲ್ ಕೂಡ ಕೊರೆಸಲಾಗಿದೆ. ಆದರೆ, ಕಟ್ಟಡಕ್ಕೆ ಅಡಿಪಾಯ ಶುರುವಾಗಬೇಕಿದೆ.
ವಾಸ್ತುಶಿಲ್ಪಿಗಳ ಜೊತೆಯಲ್ಲೂ ಸಾಕಷ್ಟು ಚರ್ಚೆ ನಡೆಸಿದ್ದು, ಅದು ಕೂಡ ಅಂತಿಮವಾಗಿದೆ. ಆದರೆ, ಅಡಿಪಾಯ ಶುರುವಾಗಿರಲಿಲ್ಲ. ಈ ಬಗ್ಗೆ ಗಮನಹರಿಸಿ, “ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೊಡಬೇಕು’ ಎಂಬ ಭಾರತಿ ವಿಷ್ಣುವರ್ಧನ್ ಅವರ ಮನವಿಗೆ ಯಡಿಯೂರಪ್ಪ ಅವರು ಸ್ಪಂದಿಸಿ, ಮುಂದಿನ ನಾಲ್ಕೈದು ದಿನಗಳಲ್ಲೇ ಅಡಿಪಾಯ ಶುರುವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಸರ್ಕಾರದಿಂದ ಸ್ಮಾರಕ ನಿರ್ಮಾಣಕ್ಕೆ 11 ಕೋಟಿ ರುಪಾಯಿ ಮಂಜೂರಾಗಿದ್ದು, 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಸ್ಮಾರಕ ಕೆಲಸ ಶುರುವಾದ ನಂತರ, ಉಳಿದ 6 ಕೋಟಿ ರೂ. ಬಿಡುಗಡೆಯಾಗಲಿದೆ ಎಂಬುದು ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರ ಮಾತು.