ಎಲ್ಲರಿಗೂ ಲಸಿಕೆ ನೀಡಿ
Team Udayavani, Mar 22, 2021, 6:30 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ವ್ಯರ್ಥವಾಗುವುದನ್ನು ತಡೆಯಲು 40 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ಈವರೆಗೆ ಒಂದೂವರೆ ಲಕ್ಷ ಡೋಸ್ ಗಳಿಗಿಂತಲೂ ಅಧಿಕ ಕೊರೊನಾ ಲಸಿಕೆ ವ್ಯರ್ಥ ವಾಗಿದೆ. ಇದನ್ನು ತಡೆಯಲು 40 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಬೇಕು ಎಂಬ ಆಗ್ರಹವನ್ನು ಬೆಂಬಲಿಸಿ ತಜ್ಞರು ಕೂಡ ಸರಕಾರಕ್ಕೆ ಪೂರಕ ಸಲಹೆ ನೀಡಿದ್ದಾರೆ.
ಕೋವಿಡ್ ಲಸಿಕೆ ವ್ಯರ್ಥವಾಗುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಶೇ. 7ರಷ್ಟು ಲಸಿಕೆ ವ್ಯರ್ಥವಾಗುತ್ತಿದೆ. ಈವರೆಗೆ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, ಹಿರಿಯರು, 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಉಳ್ಳವರಿಗೆ ಸೇರಿ ಒಟ್ಟು 23.4 ಲಕ್ಷ ಡೋಸ್ ಲಸಿಕೆ ವಿತರಿಸಿದ್ದು, ಇದರಲ್ಲಿ ಶೇ. 7ರಷ್ಟು ಅಂದರೆ 1.61 ಲಕ್ಷ ಡೋಸ್ ವ್ಯರ್ಥವಾಗಿದೆ.
ಲಸಿಕೆ ಸೀಸೆಯಲ್ಲಿರುತ್ತದೆ. ಒಂದು ಕೋವಿಶೀಲ್ಡ್ ಸೀಸೆಯಲ್ಲಿ 10 ಡೋಸ್, ಒಂದು ಕೊವ್ಯಾಕ್ಸಿನ್ ಸೀಸೆಯಲ್ಲಿ 20 ಡೋಸ್ ಇರುತ್ತದೆ. ಒಮ್ಮೆ ಸೀಸೆ ತೆರೆದರೆ ಅದರ ಕಾಲಾವಧಿ ನಾಲ್ಕು ತಾಸು ಮಾತ್ರ, ಅಷ್ಟರೊಳಗೆ ಫಲಾನುಭವಿಗಳಿಗೆ ನೀಡಿ ಖಾಲಿ ಮಾಡಬೇಕಿದೆ (ಒಂದು ಡೋಸ್ ಒಬ್ಬರಿಗೆ). ಖಾಲಿ ಮಾಡಲು ಸಾಧ್ಯವಾಗದಿದ್ದರೆ ವ್ಯರ್ಥ (ವೇಸ್ಟೇಜ್) ಎಂದು ನಮೂದಿಸಿ ಕಸದಬುಟ್ಟಿಗೆ ಸೇರಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ನಿಗದಿತ ಅವಧಿಯಲ್ಲಿ ಫಲಾನುಭವಿಗಳು ಆಗಮಿಸದ ಹಿನ್ನೆಲೆಯಲ್ಲಿ ಲಸಿಕೆ ವ್ಯರ್ಥವಾಗುತ್ತಿದೆ.
ಅಮೆರಿಕ ಮಾದರಿ ಅನುಸರಿಸಿ :
ಅಮೆರಿಕದಲ್ಲಿ ಕೋವಿಡ್ ಲಸಿಕೆ ನೀಡಲು ನಿಗದಿ ಪಡಿಸಿ ರುವವರು ಬಾರದಿದ್ದರೆ ಅವರ ಲಸಿಕೆಯನ್ನು ಸ್ಥಳದಲ್ಲಿ ಲಭ್ಯವಿರುವ ಸಾರ್ವ ಜನಿಕರಿಗೆ ನೀಡಲಾಗುತ್ತದೆ. ಈ ಮೂಲಕ ಲಸಿಕೆ ವ್ಯರ್ಥ ವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಮ್ಮಲ್ಲಿಯೂ “ಲಸಿಕೆ ವ್ಯರ್ಥವಾಗುವಂತಿದ್ದರೆ ನಿಮ್ಮನ್ನು ಆಹ್ವಾನಿ ಸುತ್ತೇವೆ, ಬಂದು ಲಸಿಕೆ ಪಡೆಯಬಹುದು’ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಬಹುದಾಗಿದೆ. 60 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆಯುಳ್ಳವರು ಬಾರದಿದ್ದರೆ ಸಮೀಪದ ಸಾರ್ವಜನಿಕರನ್ನು ಆಹ್ವಾನಿಸಿ ಲಸಿಕೆ ನೀಡಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ ಡಾ| ಸುದರ್ಶನ್ ಬಲ್ಲಾಳ್ ಸಲಹೆ ನೀಡಿದ್ದಾರೆ.
ಸರ್ವಪಕ್ಷ ಸಭೆ ಕರೆಯಿರಿ :
ಕೋವಿಡ್ 2ನೇ ಅಲೆ ನಿಯಂತ್ರಿಸುವ ಕುರಿತು ಸರ್ವಪಕ್ಷ ಸಭೆ ಕರೆದು ಚರ್ಚಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ಜನಸಾಮಾನ್ಯರ ನಡವಳಿಕೆ ಬದ ಲಾಗಬೇಕು. ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ದರೆ ಅಪಾಯವಿದೆ ಎಂದಿದ್ದಾರೆ. ಸೋಂಕು ಹೆಚ್ಚಾದರೆ ಸರಕಾರ ಕೂಡ ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಸುರಕ್ಷಿತವಾಗಿದ್ದರೆ, ನಿಮ್ಮನ್ನು ನಂಬಿದ ಮನೆಯವರೂ ಸುರಕ್ಷಿತವಾಗಿರುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ತಜ್ಞರ ಪ್ರಮುಖ ಸಲಹೆಗಳು :
- ಭವಿಷ್ಯದಲ್ಲಿ ಎಲ್ಲರಿಗೂ ಲಸಿಕೆ ನೀಡಲೇಬೇಕು. ಶೀಘ್ರವಾಗಿ ಹೆಚ್ಚು ಮಂದಿಗೆ ಲಸಿಕೆ ನೀಡುವುದರಿಂದ ಅವರನ್ನು ಸೋಂಕಿನಿಂದ ರಕ್ಷಿಸಬಹುದು.
- ವಯಸ್ಕರು ಶ್ರಮಜೀವಿಗಳಾಗಿದ್ದು, ಆರ್ಥಿಕತೆಯ ಆಧಾರ ಸ್ತಂಭವಾಗಿದ್ದಾರೆ. ಅವರನ್ನು ಸೋಂಕಿನಿಂದ ರಕ್ಷಿಸಿಕೊಳ್ಳುವುದು ಸರಕಾರದ ಜವಾಬ್ದಾರಿ.
- ಲಸಿಕೆ ಕಡಿಮೆ ಇದ್ದಾಗ ಹಿರಿಯರಿಗೆ, ರೋಗಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸದ್ಯ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ಶೀಘ್ರ ಸಾರ್ವಜನಿಕರಿಗೂ ಲಸಿಕೆ ನೀಡಬೇಕು.
- ಕೋವಿಡ್ ಎರಡನೇ ಅಲೆ ಭೀತಿ ಇರುವ ರಾಜ್ಯಗಳಲ್ಲಾದರೂ ಎಲ್ಲರಿಗೂ ತುರ್ತಾಗಿ ಲಸಿಕೆ ನೀಡಬೇಕು.
- ಅದರಲ್ಲೂ 45ರಿಂದ 59 ವರ್ಷದ ಆರೋಗ್ಯ ಸಮಸ್ಯೆಯುಳ್ಳವರಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ಲಸಿಕೆ ಪಡೆಯುವ ಅವಕಾಶವನ್ನು ಎಲ್ಲರಿಗೂ ಒದಗಿಸಿದರೆ ವ್ಯರ್ಥವಾಗುವುದನ್ನು ಕಡಿಮೆ ಮಾಡಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.
40 -59 ವಯಸ್ಸಿನವರಲ್ಲಿಯೇ ಶೇ. 30ರಷ್ಟು ಸಾವು :
ಈವರೆಗಿನ ಸೋಂಕುಪೀಡಿತರ ಸಾವಿನಲ್ಲಿ 40ರಿಂದ 59 ವರ್ಷಗಳ ಒಳಗಿನವರೇ ಶೇ. 30ಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ 40 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಎಂಬುದು ಜನಾಗ್ರಹ.
ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು 20ರಿಂದ 40 ವರ್ಷಗಳೊ ಳಗಿನವರಿಗೆ. ಈ ವಯೋಮಾನದವರು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಎಲ್ಲ ವಯಸ್ಕರಿಗೂ ಕೋವಿಡ್ ಲಸಿಕೆ ನೀಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರ ಸಲಹಾ ಸಮಿತಿ ಸದಸ್ಯ ಡಾ| ಸಿ.ಎನ್. ಮಂಜುನಾಥ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?