ಶಾಲೆ ಶುರುವಾಗಿದೆ, ಕೂಡಲೇ ಶೂ-ಸಮವಸ್ತ್ರ ಕೊಡಿ: ಸಿದ್ದರಾಮಯ್ಯ ಆಗ್ರಹ
Team Udayavani, Jul 9, 2022, 12:44 PM IST
ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಶೂ- ಸಾಕ್ಸ್ ನೀಡುತ್ತಿದ್ದೆವು. ಬಡ ಮಕ್ಕಳಿಗೆ ಅನುಕೂಲವಾಗಲಿ, ಸಮಾನ ಮನೋಭಾವವಿರಲಿ ಎಂದು ಕೊಡುತ್ತಿದ್ದೆವು. ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಲು ಹೊರಟಿತ್ತು. ಈಗ ನಾವು ಒತ್ತಾಯ ಮಾಡಿದ ಮೇಲೆ ಕೊಡುತ್ತೇವೆ ಎಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಶುರುವಾಗಿವೆ. ಈಗಾಗಲೇ ಶೂ, ಸಮವಸ್ತ್ರ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ಕೂಡಲೇ ಮಕ್ಕಳಿಗೆ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇದನ್ನೂ ಓದಿ:ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಿಂದ ರೈತರಿಗೆ ಅನುಕೂಲ: ಅಣ್ಣಾಸಾಹೇಬ ಜೊಲ್ಲೆ
ರಾಜ್ಯದಲ್ಲಿ ಮಳೆ ಹಾನಿ ವಿಚಾರವಾಗಿ ಮಾತನಾಡಿದ ಅವರು, ಉಸ್ತುವಾರಿಗಳು ಜಿಲ್ಲೆಗೆ ಹೋಗುತ್ತಿಲ್ಲ. ಜನರ ಕಷ್ಟ ಸುಖಗಳನ್ನು ಕೇಳಬೇಕಲ್ಲ. ಇಲ್ಲಿ ಬರೀ ಮೀಟಿಂಗ್ ಮಾಡಿದರೆ ಸಾಕೆ? ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೆಯೇ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.