ಗೋ ಸಂರಕ್ಷಣೆಗೆ ನಿರ್ಮಾಣಗೊಳ್ಳುತ್ತಿದೆ “ಗೋಸ್ವರ್ಗ’
Team Udayavani, Apr 11, 2018, 6:00 AM IST
ಬೆಂಗಳೂರು: ಗೋ ಸಂರಕ್ಷಣೆ ದೃಷ್ಟಿ ಯಿಂದ ಹೊಸನಗರ ರಾಮಚಂದ್ರಾಪುರ ಮಠವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನುಳಿ ಮಠದ ಸಮೀಪ “ಗೋಸ್ವರ್ಗ’ ನಿರ್ಮಿಸುತ್ತಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಹೆಸರೇ ಸೂಚಿಸುವಂತೆ ಇದು ಅಕ್ಷರಶಃ ಗೋವುಗಳಿಗೆ ಸ್ವರ್ಗವಾಗಲಿದೆ. ಇಲ್ಲಿ ಬಂಧನದ ಬೇಲಿ ಇರುವುದಿಲ್ಲ. ವಿಷಮುಕ್ತ ಮೇವು, ಸುಸಜ್ಜಿತ ಚಿಕಿತ್ಸಾಲಯ, ಸಹಜ ಜನನ-ಮರಣ ಇರಲಿದೆ. ಕಟುಕರ ಪಾಲಾಗುವ ಯಾವುದೇ ಆತಂಕಗಳಿಲ್ಲ. ಸ್ವಾಭಾವಿಕ ವಾಗಿ ಗೋವುಗಳ ಪಾಲನೆ-ಪೋಷಣೆ ನಡೆಯಲಿದೆ ಎಂದು ಹೇಳಿದರು.
ಮೇ 2ರಂದು ಯೋಜನೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಇದು ಉದ್ಘಾಟನೆ ಗೊಳ್ಳಲಿದ್ದು, ಮೇ 27ರಂದು
ಲೋಕಾರ್ಪಣೆಗೊಳ್ಳಲಿದೆ. ನೂರು ಎಕರೆ ಪ್ರದೇಶದಲ್ಲಿ ಈ ಗೋಸ್ವರ್ಗ ನಿರ್ಮಾಣಗೊಳ್ಳುತ್ತಿದ್ದು, ಗೋವುಗಳನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ. 24 ಗಂಟೆ ಮೇವು, ನೀರು ಲಭ್ಯವಾಗಲಿದೆ. ಗೋಪಾಲನೆಗೆ ದೇಶದಲ್ಲೇ ಇದೊಂದು ಹೊಸ ಪರಿಕಲ್ಪನೆ. ಅಂದಾಜು 7 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇಲ್ಲಿಗೆ ಭೇಟಿ ನೀಡುವ ಜನರಿಗೆ ಪ್ರೇಕ್ಷಾಪಥ ನಿರ್ಮಿಸಲಾಗಿದೆ. ಸರೋವರದ ನಾಲ್ಕೂ ದಿಕ್ಕುಗಳಲ್ಲಿ ಗೋವುಗಳಿಗಾಗಿ ನಿರಂತರವಾಗಿ ಸತ್ಸಂಗ, ಸಂಗೀತ ಪಾರಾಯಣ ನಡೆಯಲಿದೆ. ಯಾತ್ರಿಗಳನ್ನು ಸರೋವರದ ಮಧ್ಯೆ ಕೊಂಡೊಯ್ಯಲು ತೀರ್ಥಪಥ ನಿರ್ಮಿಸ ಲಾಗುತ್ತಿದೆ ಎಂದರು. ಕಾಮದುಘಾ ಟ್ರಸ್ಟ್ ಅಧ್ಯಕ್ಷ
ಡಾ.ವೈ.ವಿ.ಕೃಷ್ಣಮೂರ್ತಿ, ಗೋಫಲ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ ಎಸ್.ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾಧ್ಯಮ ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ಗ್ರಾಮರಾಜ್ಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಮ್ಮಂಕಲ್ಲು ಇದ್ದರು.
ಗೋ ಸಂರಕ್ಷಣೆಗೆ ಆದ್ಯತೆ ನೀಡುವವರಿಗೆ ಬೆಂಬಲ ಯಾವುದಾದರೂ ಪಕ್ಷದಿಂದ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಘವೇಶ್ವರ ಶ್ರೀಗಳು, ಟಿಕೆಟ್ ಕೊಟ್ಟರೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಮಠವು ಯಾವುದೇ ಪಕ್ಷ
ಅಥವಾ ನಾಯಕರೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಗೋ ಸಂರಕ್ಷಣೆಗೆ ಆದ್ಯತೆ ನೀಡುವ, ಗೋಹತ್ಯೆ ನಿಷೇಧದ ಪರವಾಗಿರುವ ಯಾವುದೇ ರಾಜಕೀಯ ನಾಯಕರನ್ನು ನಾವು ಬೆಂಬಲಿಸುತ್ತೇವೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸ್ಪಷ್ಟಪಡಿಸಿದರು.