ನಿಖಿಲ್ ನಾಮಪತ್ರಕ್ಕೆ ಶಾರದಾಂಬೆ ಸನ್ನಿಧಿಯಲ್ಲಿ ಪೂಜೆ
Team Udayavani, Mar 17, 2019, 8:47 AM IST
ಬೆಂಗಳೂರು: ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಪ್ರವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್ ಜೊತೆ ಗುದ್ದಾಡಿ ಮೈಸೂರು ಲೋಕಸಭಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕುಮಾರಸ್ವಾಮಿಯವರು ಮೊನ್ನೆ ತಾನೇ ಮಂಡ್ಯದಲ್ಲಿ ಬೃಹತ್ ಸಮಾವೇಶವನ್ನು ನಡೆಸಿ ಅಲ್ಲಿ ತಮ್ಮ ಪುತ್ರನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ಕೆಲಸವನ್ನೂ ಮಾಡಿದ್ದರು.
ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕೆ ಜನಾಶೀರ್ವಾದದ ಜೊತೆ ದೈವಾಶೀರ್ವಾದವೂ ಮುಖ್ಯವೆಂದು ನಂಬಿರುವ ಕುಮಾರಸ್ವಾಮಿಯವರು ಈಗಾಗಲೇ ಒಂದು ಸಲ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದೀಗ ನಿಖಿಲ್ ಅವರು ನಾಮಪತ್ರ ಸಲ್ಲಿಸುವುದಕ್ಕೆ ಮುಂಚಿತವಾಗಿ ಸೋಮವಾರದಂದು ಮತ್ತೆ ಕುಟುಂಬ ಸಹಿತ ಶೃಂಗೇರಿಗೆ ತೆರಳಲಿರುವ ಮುಖ್ಯಮಂತ್ರಿಯವರು ಅಲ್ಲಿ ನಿಖಿಲ್ ಪರವಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಕುಮಾರಸ್ವಾಮಿಯುವರು ಪುತ್ರ ಮತ್ತು ಪತ್ನಿಯೊಂದಿಗೆ ಹೆಲಿಕಾಫ್ಟರ್ ನಲ್ಲಿ ಶೃಂಗೇರಿಗೆ ತೆರಲಿ ಅಲ್ಲಿ ಶಾರದಾಂಬೆಯ ದರ್ಶನವನ್ನು ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಅವರು ನಾಮಪತ್ರವನ್ನು ಯಾವಾಗ ಸಲ್ಲಿಸುತ್ತಾರೆ ಎಂದು ಇನ್ನೂ ತಿಳಿದುಬಂದಿಲ್ಲ.