ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ
Team Udayavani, Apr 22, 2021, 7:47 PM IST
ಬೆಂಗಳೂರು: ಇಂದು ಕೋವಿಡ್ ನಿಯಮಗಳಲ್ಲಿ ದಿಢೀರ್ ಬದಲಾವಣೆ ಮಾಡಿ ಅಘೋಷಿತ ಲಾಕ್ ಡೌನ್ಗೆ ಸೂಚಿಸಿರುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಸರ್ಕಾರದ ನಡೆಯನ್ನು ತೀವ್ರ ಖಂಡಿಸಿರುವ ಹೆಚ್ಡಿಕೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಎಲ್ಲವನ್ನೂ ಬಂದ್ ಮಾಡಿ ಆದೇಶ ಹೊರಡಿಸಿರುವುದು ತುಘ್ಲಕ್ ದರ್ಬಾರದಂತಿದೆ. ಸರ್ಕಾರದ ಈ ಹೊಸ ನಿಯಮಗಳು ಬಡ ಜನರನ್ನು, ಬೀದಿ ಅಂಗಡಿಯವರನ್ನು ಸಂಕಷ್ಟಕ್ಕೆ ದೂಡಿದೆ.
ಜನರ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಸಿರುವ ಕುಮಾರಸ್ವಾಮಿ,ಯಾರನ್ನೋ ಮೆಚ್ಚಿಸಲು ಇಂತಹ ದೂರದೃಷ್ಟಿಯಿಲ್ಲದ ಕ್ರಮ ಕೈಗೊಳ್ಳಬೇಡಿ. ಪ್ರತಿ ಕುಟುಂಬಕ್ಕೆ ಆರೋಗ್ಯದ ರಕ್ಷಣೆಗೆ ಮುಂದಾಗಿ ಎಂದು ಒತ್ತಾಯಿಸಿದ್ದಾರೆ.
ಕಳೆದ ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ಘೋಷಿಸುವಂತೆ ನಾನು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಅಂದು ನನ್ನ ಸಲಹೆಯನ್ನು ತಳ್ಳಿ ಹಾಕಲಾಗಿತ್ತು. ಆದರೆ, ಇಂದು ಏಕಾಏಕಿ ನಿಯಮಗಳನ್ನು ಬದಲಿಸಿ, ಪೊಲೀಸ್ ಅಧಿಕಾರಿಗಳ ಮೂಲಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುತ್ತಿರುವುದು ಖಂಡಿನೀಯ ಎಂದು ಕುಮಾರಸ್ವಾಮಿಗಳು ವಾಗ್ದಾಳಿ ನಡೆಸಿದ್ದಾರೆ.