ಹಾಲಪ್ಪ, ಉಮಾಶ್ರೀ ರಾಜಿ ಮಾತುಕತೆ
Team Udayavani, Jun 23, 2019, 3:00 AM IST
ಬೆಂಗಳೂರು: ರೇಪಿಸ್ಟ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ, ನಟಿ ಉಮಾಶ್ರೀ ಹಾಗೂ ಶಾಸಕ ಹರತಾಳು ಹಾಲಪ್ಪಗೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುದ್ಧಿವಾದ ಹೇಳಿದೆ.
ನಟಿ ಉಮಾಶ್ರೀ ವಿರುದ್ಧ ಶಾಸಕ ಹಾಲಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಹಾಲಪ್ಪ ಮತ್ತು ಉಮಾಶ್ರೀ ವ್ಯಾಜ್ಯವನ್ನು ಕೋರ್ಟ್ ವ್ಯಾಪ್ತಿಯಿಂದ ಹೊರಗಡೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಆದರಿಂದ ವಿಚಾರಣೆ ಕೈಬಿಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮಾನ್ಯ ಮಾಡಿದ ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ರಾಮಚಂದ್ರ ಡಿ.ಹುದ್ದಾರ ಅವರು, “ರಾಜ್ಯದಲ್ಲಿ ಬರ ಬಂದಿದೆ. ಜನ ನೀರಿಲ್ಲದೆ ಒದ್ದಾಡುತ್ತಿದ್ದಾರೆ. ಜನಪ್ರತಿನಿಧಿಗಳಾದ ನೀವುಗಳು ಸ್ವಪ್ರತಿಷ್ಠೆಗಾಗಿ ಕಚ್ಚಾಡುವುದನ್ನು ಬಿಟ್ಟು ಜನಸೇವೆ ಮಾಡಿ. ಅಧಿಕಾರ ಮತ್ತು ಹುದ್ದೆ ಯಾವುದೂ ಶಾಶ್ವತ ಅಲ್ಲ. ನಮಗೆಲ್ಲ ಇರೋದೇ 60-70 ವರ್ಷ ಆಯಸ್ಸು.
ಅದರಲ್ಲಿ ಮೂರನೇ ಒಂದು ಭಾಗ ಕೇವಲ ನಿದ್ದೆಯಲ್ಲೇ ಕಳೆಯುತ್ತೇವೆ. ಇರುವ ಸಮಯದಲ್ಲೇ ಜನರಿಗಾಗಿ ಕೆಲಸ ಮಾಡಬೇಕು. ಇವೆಲ್ಲವನ್ನು ಮನವರಿಕೆ ಮಾಡಿಕೊಂಡು, ನಿಮ್ಮ ವ್ಯಕ್ತಿತ್ವ, ಘನತೆಗೆ ಧಕ್ಕೆ ಆಗದ್ದಂತೆ ವರ್ತಿಸಿ’ ಎಂದು ಇಬ್ಬರು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.
ನ್ಯಾಯಾಲಯದಲ್ಲಿ ಹಾಜರಿದ್ದ ಹಾಲಪ್ಪ ಮತ್ತು ಉಮಾಶ್ರೀ, ನಮ್ಮಿಬ್ಬರ ಪಕ್ಷ ಬೇರೆಯಾದರೂ ನಮ್ಮಲ್ಲಿ ಕೊಡು-ಕೊಳ್ಳುವಿಕೆ ಇರುತ್ತದೆ. ಹೀಗಾಗಿ, ಜನಸೇವೆಯ ದೃಷ್ಟಿಯಿಂದ ಎಲ್ಲವನ್ನು ಮರೆತಿದ್ದೇವೆ. ಪ್ರತಿನಿತ್ಯ ಒಬ್ಬರನೊಬ್ಬರು ಭೇಟಿಯಾಗಲೇ ಬೇಕು. ಹೀಗಾಗಿ, ವ್ಯಾಜ್ಯ ಮುಂದುವರಿಸಲು ಇಷ್ಟವಿಲ್ಲ. ಆದ್ದರಿಂದ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಇಬ್ಬರು ಅರ್ಜಿಯಲ್ಲಿ ಉಲ್ಲೇಖೀಸಿದ್ದರು.