ಆಟೋದಲ್ಲಿ ಬಂದು ಶರಣಾದ ಹ್ಯಾರಿಸ್ ಪುತ್ರ!: ಧಿಕ್ಕಾರದ ಸ್ವಾಗತ
Team Udayavani, Feb 19, 2018, 11:17 AM IST
ಬೆಂಗಳೂರು: ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಪುತ್ರ ಮಹಮದ್ ನಲಪಾಡ್ ಕೊನೆಗೂ ಸೋಮವಾರ 11 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹ್ಯಾರಿಸ್ ಅವರು ಮಗನಿಗೆ ಪೊಲೀಸರಿಗೆ ಶರಣಾಗಲು ಸೂಚಿಸಿದ್ದೇನೆ ಎಂದು ಹೇಳಿಕೆ ನೀಡದ 2 ಗಂಟೆ ಕಳೆದ ಬಳಿಕ ಆಟೋ ರಿಕ್ಷಾದಲ್ಲಿ ಬಂದ ನಲಪಾಡ್ ಠಾಣೆ ಒಳಗೆ ತೆರಳಿದ್ದಾನೆ.
ಠಾಣೆ ಎದುರು ವಿಪಕ್ಷಗಳ ಧಿಕ್ಕಾರ, ಕಾಂಗ್ರೆಸ್ ಜೈಕಾರ
ಠಾಣೆ ಎದುರು ಜಮಾವಣೆಗೊಂಡಿರುವ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ನಲಪಾಡ್ನನ್ನು ನೋಡುತ್ತಿದ್ದಂತೆ ಧಿಕ್ಕಾರ ಕೂಗಿದ್ದಾರೆ. ನ್ಯಾಯಬೇಕು , ನ್ಯಾಯಬೇಕು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನೊಂದೆಡೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹ್ಯಾರಿಸ್ಗೆ ಜೈಕಾರ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಠಾಣೆ ಎದುರು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಠಾಣೆ ಎದುರು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು , ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಒಳ ಪ್ರವೇಶಿಸದಂತೆ ತಡೆ ಹಾಕಲಾಗಿದೆ.
ಶನಿವಾರ ರಾತ್ರಿ ಬೆಂಗಳೂರಿನ ಹೊಟೇಲೊಂದರಲ್ಲಿ ಟೇಬಲಿಗೆ ಕಾಲು ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ, ಇದೀಗ 37 ಗಂಟೆಗಳ ಬಳಿಕ ಶರಣಾಗಿದ್ದಾನೆ.