ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ: ಅಪ್ಪಾಜಿ ಕ್ಯಾಂಟೀನ್ ಗೆ ನಿಖಿಲ್ ಭೇಟಿ
1 ರೂಪಾಯಿಗೆ ರಾಗಿ ಮುದ್ದೆ ಊಟ ಇಂದಿನ ಸ್ಪೆಷಲ್
Team Udayavani, May 18, 2022, 4:47 PM IST
ಬೆಂಗಳೂರು: ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಹನುಮಂತನಗರದಲ್ಲಿರುವ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಕ್ಯಾಂಟೀನ್ಗೆ ಬಂದ ಗ್ರಾಹಕರಿಗೆ ಉಪಚರಿಸಿ ಊಟ ಬಡಿಸಿದರು.
ಕ್ಯಾಂಟೀನ್ ನಲ್ಲಿ ಕೇಕ್ ಕತ್ತರಿಸಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮಧ್ಯಾಹ್ನದ ಭೋಜನವಾಗಿ ರಾಗಿಮುದ್ದೆಯನ್ನು ಅಪ್ಪಾಜಿ ಕ್ಯಾಂಟೀನ್ ನಲ್ಲಿಯೇ ನಿಖಿಲ್ ಸವಿದರು. ಬಳಿಕ ಕ್ಯಾಂಟೀನ್ ಸಿಬ್ಬಂದಿಗಳ ಜೊತೆ ಕೆಲಹೊತ್ತು ನಿಖಿಲ್ ಕುಮಾರಸ್ವಾಮಿ ಕಾಲ ಕಳೆದರು. ದೇವೇಗೌಡರ ವಿಚಾರಗಳನ್ನ ಅರ್ಥ ಮಾಡಿಕೊಂಡು ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ಕಡಿಮೆ ಹಣಕ್ಕೆ ಊಟ ವಿತರಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರು, ಕಾರ್ಮಿಕರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಗಮನದಟ್ಟಿಕೊಂಡು 10 ರೂಪಾಯಿಗೆ ರಾಜ್ಯ ಜೆಡಿಎಸ್ ವಕ್ತಾರರಾದ ಟಿ.ಎ. ಶರವಣ ಅವರು ಅನ್ನದಾಸೋಹ ನಡೆಸುತ್ತಿದ್ದಾರೆ. ಇದು ಹೀಗೆಯೇ ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧಿಸುವುದು ಖಚಿತ : ರುದ್ರಮುನಿ ಸ್ವಾಮೀಜಿ
ಈ ವೇಳೆ ವಿಧಾನ ಪರಿಷತ್ ಮಾಜಿ ಶಾಸಕರು ಹಾಗು ರಾಜ್ಯ ಜೆಡಿಎಸ್ ವಕ್ತಾರರಾದ ಟಿ.ಎ. ಶರವಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು. ಇಂದು ವಿಶೇಷವಾಗಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಕ್ಯಾಂಟೀನ್ ನಲ್ಲಿ 1 ರೂಪಾಯಿಗೆ ಊಟ ವಿತರಿಸಲಾಗುತ್ತಿದೆ.