ಮಾಯಾವತಿ ಬೆಂಬಲ ಕೋರಿದ ಎಚ್ಡಿಡಿ
Team Udayavani, Jul 15, 2019, 3:05 AM IST
ಬೆಂಗಳೂರು: ಸದನದಲ್ಲಿ ಪ್ರತಿಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನ ಕೋರಿ ಬಿಎಸ್ಪಿ ಶಾಸಕ ಎನ್.ಮಹೇಶ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.
ಸದನದಲ್ಲಿ ಪ್ರತಿಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನ ಕೋರಿರುವುದರಿಂದ ಒಂದೊಮ್ಮೆ ಸರ್ಕಾರ ವಿಶ್ವಾಸಮತ ಯಾಚಿಸುವ ವೇಳೆ ಬಿಎಸ್ಪಿ ಶಾಸಕ ಎನ್.ಮಹೇಶ್ ಬಿಜೆಪಿ ಪರ ಮತ ಚಲಾಯಿಸಬಹುದು. ಇಲ್ಲವೇ, ತಟಸ್ಥರಾಗಿ ಉಳಿಯಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಮಾಯಾವತಿಯವರಿಗೆ ಫೋನ್ ಮಾಡಿರುವ ದೇವೇಗೌಡರು, ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ಪರ ಮತ ಚಲಾಯಿಸಲು ಶಾಸಕರಿಗೆ ಹೇಳುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಯಾವತಿ, ಮಧ್ಯಪ್ರದೇಶದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಪ್ರತ್ಯೇಕ ಆಸನ ಕೋರಲು ನಾವೇ ಸೂಚಿಸಿದ್ದೇವೆ. ಸಂದರ್ಭಾನುಸಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.