ಎಚ್ಡಿಕೆ – ಈಶ್ವರಪ್ಪ ಟ್ವೀಟ್ ವಾರ್
Team Udayavani, Jan 19, 2020, 3:04 AM IST
ಬೆಂಗಳೂರು: ಸಂಸದ ತೇಜಸ್ವಿ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಯುಗಪುರುಷರೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಟೀಕೆಗೆ ಬಿಜೆಪಿ ಮುಖಂಡರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟ್ವೀಟ್ ಮಾಡಿ, ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು.
ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಯೋಗ್ಯತೆಗೆ ತಕ್ಕ ಮಾತು ಎಂದು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಇದಕ್ಕೆ ಮತ್ತೆ ಆಕ್ರೋಶ ಹೊರಹಾಕಿರುವ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ಇಷ್ಟವಿಲ್ಲ? ವಯಸ್ಸಿಗೆ ಬಂದವರಿಗೆಲ್ಲರಿಗೂ ನಟಿ ಐಶ್ವರ್ಯ ರೈ ಬೇಕು ಎಂಬ ಡಿಸಿಎಂ ಹುದ್ದೆ ಬಗ್ಗೆ ಕೀಳಾಗಿ ಮಾತನಾಡಿದವ ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡೋಕಾಗುತ್ತೆ ಎಂದು ಪೆಕರನಂತೆ ಪ್ರಶ್ನಿಸಿದವನು ನಾನಲ್ಲ ಎಂದು ಟೀಕಿಸಿದ್ದಾರೆ.