ಎಚ್ಡಿಕೆ ನಾಲಾಯಕ್, ದೇಶದ್ರೋಹಿ: ಜೋಶಿ
Team Udayavani, Jan 22, 2020, 3:05 AM IST
ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು ದೇಶದ್ರೋಹಿ ಹೇಳಿಕೆಯಾಗಿದ್ದು, ಅವರ ನಡೆ ನಾಲಾಯಕ್ತನದ ಪರಮಾವಧಿ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಗತ್ತಿನ ಮುಂದೆ ಭಾರತ ಉಗ್ರವಾದದ ವಿರುದ್ಧ ಹೋರಾಟ ಮಾಡುತ್ತಿದ್ದು, ಉಗ್ರರನ್ನು ಸೃಷ್ಟಿಸುತ್ತಿರುವ ಪಾಕಿಸ್ತಾನವನ್ನು ಏಕಾಂಗಿ ಮಾಡಬೇಕು ಎಂಬುದು ಭಾರತ ನಿಲುವಾಗಿದೆ. ಇಂತಹ ಹೇಳಿಕೆಗಳನ್ನು ದೇಶದ ವಿರುದ್ಧವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಹೇಳಿಕೆಗಳನ್ನು ನೀಡುವಾಗ ಜಾಗರೂಕತೆ ವಹಿಸಬೇಕು. ಕೂಡಲೇ ಕುಮಾರಸ್ವಾಮಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದರು. ಕಾಶ್ಮೀರ 370 ವಿಶೇಷ ಮೀಸಲಾತಿ ರದ್ದುಪಡಿಸಿದಾಗ ರಾಹುಲ್ ಗಾಂಧಿ ಇಂತಹ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಬಳಕೆ ಮಾಡಿಕೊಂಡಿತು. ಜಗತ್ತಿನಲ್ಲಿ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳ ಹಿಂದೆ ಪಾಕಿಸ್ತಾನವಿದೆ ಎಂಬುದು ದೇಶದ ವಾದ.
ದೇಶದಲ್ಲಿರುವವರೇ ಈ ರೀತಿ ಹೇಳಿಕೆ ನೀಡಿದರೆ ಇದು ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾಶ್ಮೀರಕ್ಕೆ ನೀಡಿದ್ದ ಮೀಸಲಾತಿ ಹಿಂಪಡೆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಭಾರತದ ಪರ ಇದ್ದಾರೋ ಅಥವಾ ಪಾಕಿಸ್ತಾನ ಪರವಾಗಿದ್ದರೋ ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದರು.