ನೀರಿ ಜತೆ ಒಡಂಬಡಿಕೆ: ಮನಪಾಗೆ ಹೈಕೋರ್ಟ್ ಸೂಚನೆ
Team Udayavani, Dec 3, 2020, 6:01 AM IST
ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಮತ್ತು ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ ಭೂಭರ್ತಿ ಘಟಕ (ಲ್ಯಾಂಡ್ಫಿಲ್ ಸೈಟ್)ವು ಕೆಳಕ್ಕೆ ಜಾರಿ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು “ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನ ಸಂಸ್ಥೆ (ನೀರಿ) ಜತೆಗೆ ಅಧಿಕೃತ ಒಡಂಬಡಿಕೆ ಮಾಡಿಕೊಳ್ಳುವಂತೆ ಪಾಲಿಕೆಗೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವಿಚಾರವಾಗಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು, ನೀರಿ ಸಂಸ್ಥೆ ನೇಮಕ ಮಾಡಿಕೊಳ್ಳಲು ಅಭ್ಯಂತರವಿಲ್ಲ ಎಂದು ತಿಳಿಸಿದರು. ಹಾಗಾದರೆ ಸಂಸ್ಥೆ ಯೊಂದಿಗೆ ಅಧಿಕೃತ ಒಡಂ ಬಡಿಕೆ ಮಾಡಿಕೊಳ್ಳುವಂತೆ ನ್ಯಾಯ ಪೀಠ ಪಾಲಿಕೆಗೆ ಸೂಚನೆ ನೀಡಿತು.
ಕ್ರಿಮಿನಲ್ ಪ್ರಕರಣಕ್ಕೂ ನಿರ್ದೇಶನ
ತ್ಯಾಜ್ಯ ವಿಲೇವಾರಿ ಸಮಸ್ಯೆ ಉಂಟಾಗಲು ಕಾರಣರಾದ ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖ ಲಿಸಲು ಡಿ. 7ರೊಳಗೆ ಅಗತ್ಯ ಕ್ರಮ ಜರಗಿಸುವಂತೆ ಇದೇ ವೇಳೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಪೀಠ ನಿರ್ದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಶ್ರೀಧರ ಪ್ರಭು ವಾದಿಸಿ, ಸ್ಮಾರ್ಟ್ ಸಿಟಿ ಕಂಪೆನಿ ಲಿಮಿಟೆಡ್ ವತಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಸಾಕಷ್ಟು ಕಟ್ಟಡ ನಿರ್ಮಾಣ ತ್ಯಾಜ್ಯವು ಉತ್ಪಾದನೆಯಾಗಿದ್ದು, ಅದನ್ನು ಘನ ತ್ಯಾಜ್ಯ ನಿರ್ವಹಣ ನಿಯಮಗಳಡಿ ನಿರ್ವಹಿಸುವಲ್ಲಿ ಕಂಪೆನಿ ವಿಫಲವಾಗಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯ ಪೀಠ, ಸ್ಮಾರ್ಟ್ ಸಿಟಿ ಕಂಪೆನಿ ಲಿ. ಯನ್ನು ತರಾಟೆಗೆ ತೆಗೆದುಕೊಂಡಿತು. ಕಂಪೆನಿಯು ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಂಪೆನಿಯ ಎಲ್ಲ ಕಾಮಗಾರಿಗಳನ್ನು ತಡೆಹಿಡಿದು ಆದೇಶ ಹೊರಡಿಸಲಾಗುವುದು ಎಚ್ಚರಿಕೆ ನೀಡಿತು.